ಪಿಜ್ಜಾ
ನವದೆಹಲಿ: ಎಫ್ಐಆರ್ ರದ್ದು ಮಾಡಬೇಕಾದರೆ ಸರ್ಕಾರಿ ಶಿಶು ಪಾಲನಾ ಕೇಂದ್ರದ ಮಕ್ಕಳಿಗೆ ಪಿಜ್ಜಾ ಹಾಗೂ ಮಜ್ಜಿಗೆ ನೀಡಬೇಕು ಎಂದು ಸಾಕು ಪ್ರಾಣಿ ಸಂಬಂಧ ಜಗಳವಾಡಿ ಕೋರ್ಟ್ ಮೆಟ್ಟಲೇರಿದ್ದ ನರೆಹೊರೆಯ ಇಬ್ಬರಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಜಿಬಿಟಿ ಆಸ್ಪತ್ರೆ ಸನಿಹ ಇರುವ ಸಂಸ್ಕಾರ ಆಶ್ರಮದ ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ಅಮುಲ್ ಟೆಟ್ರಾ ಪ್ಯಾಕ್ ಮಜ್ಜಿಗೆ ಹಾಗೂ ತರಕಾರಿ ಮಿಶ್ರಿತ ಪಿಜ್ಜಾ ವಿತರಿಸಬೇಕು ಎಂದು ನ್ಯಾಯಮೂರ್ತಿ ಅರುಣ್ ಮೊಂಗ ನಿರ್ದೇಶಿಸಿದ್ದಾರೆ.
ಓರ್ವ ದೂರುದಾರ ಪಿಜ್ಜಾ ತಯಾರಿಸಬೇಕು, ಮತ್ತೊಬ್ಬ ಅದನ್ನು ಹಂಚಬೇಕು, ಇದನ್ನು ಸಮುದಾಯ ಸೇವೆ ಎಂದು ಪರಿಗಣಿಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಸಾಕು ಪ್ರಾಣಿ ಸಂಬಂಧ ನಡೆದ ಮಾತುಕತೆ ಜಗಳಕ್ಕೆ ತಿರುಗಿ, ಹಲ್ಲೆ ನಡೆಸಲಾಗಿದೆ ಎಂದು ಪರಸ್ಪರ ಇಬ್ಬರು ದೂರು ನೀಡಿದ್ದರು. ಈ ಬಗ್ಗೆ ಎಫ್ಐಆರ್ ಕೂಡ ದಾಖಲಾಗಿತ್ತು. ಪ್ರಕರಣವನ್ನು ಮಾತುಕತೆ ಮೂಲಕ ಬಗೆಹರಿಸಿದ್ದೇವೆ ಎಂದು ಇಬ್ಬರೂ ಕೋರ್ಟ್ ಮುಂದೆ ಅರುಹಿದ್ದಾರೆ.
ನೆರೆಮನೆಯವರಿಬ್ಬರ ಜಗಳ ಖಾಸಗಿ ವಿಷಯವಾಗಿದ್ದು, ಈ ಬಗ್ಗೆ ದಾಖಲಾಗಿರುವ ಕ್ರಿಮಿನಲ್ ದೂರನ್ನು ಮುಂದುವರಿಸುವುದು ಸಮಂಜಸವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ಆರೋಪಿಗಳಲ್ಲಿ ಒಬ್ಬರು ಪಿಜ್ಜಾ ತಯಾರಕರು ಎನ್ನುವುದು ಕೋರ್ಟ್ ಗಮನಕ್ಕೆ ಬಂದಿದೆ. ಹೀಗಾಗಿ ಶಿಶು ಪಾಲನಾ ಮಂದಿರಕ್ಕೆ ಪಿಜ್ಜಾ ಹಾಗೂ ಮಜ್ಜಿಗೆ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.
ಕೋರ್ಟ್ ಆದೇಶ ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎನ್ನುವುದನ್ನು ತನಿಖಾಧಿಕಾರಿ ಖಚಿತಪಡಿಸಿಕೊಳ್ಳಬೇಕು ಎಂದೂ ಕೋರ್ಟ್ ಹೇಳಿದೆ.
(ಬಾರ್ ಆ್ಯಂಡ್ ಬೆಂಚ್ ವರದಿ ಆಧರಿಸಿ ಮಾಡಿದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.