ಶ್ರೀನಗರ: ಕೋವಿಡ್–19 ಲಾಕ್ಡೌನ್ ನಿಯಮ ಉಲ್ಲಂಘಿಸಿ ಜೈಷೆ–ಇ–ಮೊಹಮ್ಮದ್ (ಜೆಇಎಂ) ಉಗ್ರನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಇಬ್ಬರ ವಿರುದ್ಧ ಬುಧವಾರ ದೂರು ದಾಖಲಾಗಿದೆ.
ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಜೆಇಎಂ ಕಮಾಂಡರ್ ಸಜಾದ್ ನವಾಬ್ ದಾರ್ನ ಅಂತ್ಯಕ್ರಿಯೆಯಲ್ಲಿ ಸ್ಥಳೀಯ ನೂರಾರು ಜನರು ಪಾಲ್ಗೊಂಡಿದ್ದರು. ಅವರಲ್ಲಿ ಇಬ್ಬರ ವಿರುದ್ಧ ಕೋವಿಡ್ ನಿಯಮಾವಳಿ ಉಲ್ಲಂಘನೆ ಹಾಗೂ ಸೆಕ್ಷನ್ 144 ಆದೇಶ ಉಲ್ಲಂಘನೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಉಗ್ರರ ಅಂತ್ಯಕ್ರಿಯೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರುತ್ತಿದ್ದ ಜನ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಕೆಲ ವರ್ಷಗಳ ಹಿಂದೆ ನಿರ್ಬಂಧ ಹೇರಲಾಗಿದೆ. ಆದರೂ ಸಾವಿರಾರು ಸಂಖ್ಯೆಯ ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಉಗ್ರನ ಬಂಧನ:ಬಾರಾಮುಲ್ಲ ಜಿಲ್ಲೆಯ ಚಂದೂಸಾ ಎಂಬಲ್ಲಿ ಜೈಷೆ–ಇ–ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರ ಬಸೀರ್ ಅಹಮದ್ ಬೇಗ್ ಎಂಬಾತನನ್ನು ಗುರುವಾರ ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ಆತನಿಂದ ಎಕೆ–47 ಬಂದೂಕು ಹಾಗೂ ಇತರೆ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.