ನವದೆಹಲಿ: ವೈದ್ಯಕೀಯ ಆಮ್ಲಜನಕವು ಯಾವುದೇ ದೇಶದಲ್ಲಿಯೂ ಮಿತಿ ಇಲ್ಲದಷ್ಟು ಲಭ್ಯ ಇರುವುದು ಸಾಧ್ಯವಿಲ್ಲ. ಕೋವಿಡ್ ರೋಗಿಗಳಿಗೆ ಒದಗಿಸುವುದಕ್ಕಾಗಿ ಆಮ್ಲಜನಕ ಲಭ್ಯತೆ ಹೆಚ್ಚಿಸುವುದರ ಮೇಲೆ ಪ್ರಧಾನಿಯವರೇ ನಿಗಾ ಇರಿಸಿದ್ದಾರೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಮಂಗಳವಾರ ತಿಳಿಸಿದೆ.
ದೇಶದಲ್ಲಿ ಯಾವುದೇ ಸಂದರ್ಭದಲ್ಲಿ ಲಭ್ಯ ಇರುವ ಆಮ್ಲಜನಕವನ್ನು ಎಲ್ಲ ರಾಜ್ಯಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಹಂಚಲಾಗುವುದು. ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚು ಇರುವ ರಾಜ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದೂ ಕೇಂದ್ರವು ತಿಳಿಸಿದೆ.
ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯು ಲಭ್ಯ ಸಂಪನ್ಮೂಲದ ಮೇಲೆ ಹಲವು ಮಿತಿಗಳನ್ನು ಹೇರಿದೆ. ಇಂತಹ ಸಂಪನ್ಮೂಲಗಳನ್ನು ವೃತ್ತಿಪರವಾಗಿ ಹೆಚ್ಚಿಸಬೇಕು ಮತ್ತು ಬಳಸಿಕೊಳ್ಳಬೇಕು. ಆಮ್ಲಜನಕ ಲಭ್ಯತೆಯನ್ನು ಹೆಚ್ಚಿಸುವುದಕ್ಕಾಗಿ ದೇಶದಾದ್ಯಂತ ತ್ವರಿತವಾಗಿ 162 ಪಿಎಸ್ಎ (ಪ್ರಷರ್ ಸ್ವಿಂಗ್ ಅಡ್ಸಾರ್ಪ್ಶನ್ ತಂತ್ರಜ್ಞಾನ) ಆಮ್ಲಜನಕ ತಯಾರಿಕಾ ಘಟಕಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವು ಸ್ಥಾಪಿಸಲಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಕೋರ್ಟ್ಗೆ ಹೇಳಿದೆ.
38 ಪಿಎಸ್ಎ ಆಮ್ಲಜನಕ ಘಟಕಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. 21 ಘಟಕಗಳಿಗೆ ಇದೇ 30ರೊಳಗೆ ಚಾಲನೆ ನೀಡಲಾಗುವುದು. ಉಳಿದ 105 ಘಟಕಗಳು ಮೇ 31ರೊಳಗೆ ಸಿದ್ಧವಾಗಲಿವೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡ ಪ್ರರಕಣದ ವಿಚಾರಣೆಯನ್ನು ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವಾಲಯವು 200 ಪುಟಗಳ ಪ್ರಮಾಣಪತ್ರವನ್ನು ಸಲ್ಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.