ನವದೆಹಲಿ: 'ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದುವರೆಗೆ ಕಪ್ಪು ಶಿಲೀಂಧ್ರ ಸೋಂಕು ದೃಢಪಟ್ಟ ಒಟ್ಟು 1,044 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 89 ಮಂದಿ ಮೃತಪಟ್ಟಿದ್ದಾರೆ. 92 ಜನರು ಗುಣಮುಖರಾಗಿದ್ದು, ಉಳಿದಂತೆ 863 ಸಕ್ರಿಯ ಪ್ರಕರಣಗಳಿವೆʼ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಗುರುವಾರ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ಮಾಹಿತಿಯನ್ನು ಹಂಚಿಕೊಂಡರು. ಇದೇವೇಳೆ, ದೆಹಲಿಗೆ ಹೊಸದಾಗಿ ಎಷ್ಟು ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪೂರೈಕೆಯಾಗಲಿದೆ ಎಂಬುದರ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದೂ ಹೇಳಿದ್ದಾರೆ.
ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ದಾಸ್ತಾನು ಇಲ್ಲದ ಕಾರಣ, 18-44 ವರ್ಷದೊಳಗಿನ ಫಲಾನುಭವಿಗಳಿಗೆ ದೆಹಲಿಯ ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ನೀಡುವುದನ್ನು ವಾರದ ಹಿಂದೆಯೇ ನಿಲ್ಲಿಸಲಾಗಿದೆ. ಕೋವ್ಯಾಕ್ಸಿನ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಹಾಕಿಸಿಕೊಳ್ಳಲು ನಾಲ್ಕು ವಾರಗಳ ಅಂತರ ನಿಗದಿಪಡಿಸಲಾಗಿದೆ. ಸಾಕಷ್ಟು ಜನರು ಎರಡನೇ ಡೋಸ್ ಪಡೆದುಕೊಳ್ಳಲು ಕಾಯುತ್ತಿದ್ದಾರೆ.
ಎರಡನೇ ಡೋಸ್ ವಿತರಿಸುವ ಬಗ್ಗೆಯೂ ಮಾತನಾಡಿದ ಆರೋಗ್ಯ ಸಚಿವ, 'ನಾವು ಕೇಂದ್ರ ಸರ್ಕಾರ ನೀಡಿರುವ ಸೂಚನೆಯನ್ನು ಪಾಲಿಸುತ್ತಿದ್ದೇವೆ. ನಮ್ಮ ಪಾಲಿನ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಾದರೆ ಮೊದಲ ಡೋಸ್ ನೀಡುವುದನ್ನು ನಿಲ್ಲಿಸಿ, ಈಗಾಗಲೇ ಲಸಿಕೆ ಹಾಕಿಸಿಕೊಂಡಿರುವವರಿಗೆ ಎರಡನೇ ಡೋಸ್ ವಿತರಿಸಲು ಆರಂಭಿಸುತ್ತೇವೆ. ಮೇ ತಿಂಗಳಲ್ಲಿ ನಮಗೆ ಲಸಿಕೆ ಲಭ್ಯವಾಗಿವೆ. ಜೂನ್ ವೇಳೆಗೆ ಪೂರೈಕೆ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ನಾವು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ' ಎಂದಿದ್ದಾರೆ.
ದೆಹಲಿ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ದೃಢಪಟ್ಟ 576 ಹೊಸ ಪ್ರಕರಣಗಳು ವರದಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.