ADVERTISEMENT

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಆಹಾರ ಭದ್ರತೆ, ಪೌಷ್ಟಿಕತೆಗೆ ಅಡ್ಡಿ: ಹರ್ಷವರ್ಧನ್‌

ಪಿಟಿಐ
Published 20 ಏಪ್ರಿಲ್ 2021, 8:18 IST
Last Updated 20 ಏಪ್ರಿಲ್ 2021, 8:18 IST
ಡಾ. ಹರ್ಷವರ್ಧನ್
ಡಾ. ಹರ್ಷವರ್ಧನ್   

ವಿಶ್ವಸಂಸ್ಥೆ: ‘ಕೋವಿಡ್‌ ಸಾಂಕ್ರಾಮಿಕವು ವಿಶ್ವದಾದ್ಯಂತ ಲಕ್ಷಾಂತರ ಜನರ ಆಹಾರ ಭದ್ರತೆ ಮತ್ತು ಪೌಷ್ಟಿಕತೆಗೆ ಅಡ್ಡಿಪಡಿಸಿದೆ. ಇದರಿಂದಾಗಿ 2030ರ ವೇಳೆಗೆ ಹಸಿವನ್ನು ನೀಗಿಸುವ ಗುರಿಗೂ ಹಿನ್ನಡೆಯಾಗುವ ಸಾಧ್ಯತೆ ಇದೆ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಸೋಮವಾರ ಹೇಳಿದರು.

‘ಜನಸಂಖ್ಯೆ, ಆಹಾರ ಭದ್ರತೆ, ಪೌಷ್ಟಿಕತೆ ಮತ್ತು ಸುಸ್ಥಿರ ಅಭಿವೃದ್ಧಿ’ ವಿಷಯದ ಕುರಿತಾಗಿ54ನೇ ಜನಸಂಖ್ಯೆ ಮತ್ತು ಅಭಿವೃದ್ಧಿ ಆಯೋಗವನ್ನು ಉದ್ದೇಶಿಸಿ ಮಾತನಾಡಿದ ಅವರು,‘ ಭಾರತ ಸರ್ಕಾರವು ಆಹಾರ ಭದ್ರತೆ ಮತ್ತು ಪೌಷ್ಟಿಕತೆಗೆ ಆದ್ಯತೆ ನೀಡಿದೆ. ಇದಕ್ಕೆ ಕಳೆದ ಹಲವು ವರ್ಷಗಳಿಂದ ಸರ್ಕಾರ ಜಾರಿಗೆ ತಂದಿರುವ ಕಾನೂನು ಮತ್ತು ಯೋಜನೆಗಳು ಸಾಕ್ಷಿಯಾಗಿವೆ’ ಎಂದರು.

‘ಜನಸಂಖ್ಯೆ, ಆಹಾರ ಭದ್ರತೆ, ಪೌಷ್ಟಿಕತೆ, ಸುಸ್ಥಿರ ಅಭಿವೃದ್ಧಿ ಪ್ರಮುಖ ವಿಷಯಗಳಾಗಿವೆ. ಕೋವಿಡ್‌ ಬಿಕ್ಕಟ್ಟಿನ ವೇಳೆಯಲ್ಲಿ ಇದಕ್ಕೆ ಇನ್ನಷ್ಟು ಮಹತ್ವವನ್ನು ನೀಡಲಾಗಿದೆ. ಅಲ್ಲದೆ ಈ ಸಮಯದಲ್ಲಿ ಸೋಂಕು ನಿಯಂತ್ರಣದೊಂದಿಗೆ ರೈತರಿಗೆ, ಕಾರ್ಮಿಕರಿಗೆ, ಹಿಂದುಳಿದ ಜನರಿಗೆ, ಸ್ವ–ಸಹಾಯ ಸಂಘಗಳಿಗೆ, ಮಹಿಳೆಯರಿಗೆ, ಬಡ ಹಿರಿಯ ನಾಗರಿಕರಿಗೆ ಹೆಚ್ಚಿನ ನೆರವುಗಳನ್ನು ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಭಾರತ ಸರ್ಕಾರವು ಅತಿ ಬಡವರಿಗೆ ಸಹಾಯ ಮಾಡಲು ಆಹಾರ ಭದ್ರತೆಗಾಗಿ 22.6 ಶತಕೋಟಿ ಡಾಲರ್‌ ಪರಿಹಾರ ಪ್ಯಾಕೆಜ್‌ ಅನ್ನು ಘೋಷಿಸಿದೆ. ಅಲ್ಲದೆ ಆರ್ಥಿಕತೆ ಮೇಲೆತ್ತಲು ಕೃಷಿ ಮತ್ತು ಆಹಾರ ಕ್ಷೇತ್ರಗಳಲ್ಲಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗಾಗಿ 13 ಶತಕೋಟಿ ಡಾಲರ್‌ ಯೋಜನೆಯನ್ನು ಘೋಷಿಸಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.