ADVERTISEMENT

ಕೋವಿಡ್‌: ಕರ್ನಾಟಕ, ಮಹಾರಾಷ್ಟ್ರದ ಪರಿಸ್ಥಿತಿ ಮೇಲೆ ನಿಗಾ -ಗೋವಾ ಮುಖ್ಯಮಂತ್ರಿ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 9:56 IST
Last Updated 5 ಏಪ್ರಿಲ್ 2021, 9:56 IST
ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್   

ಪಣಜಿ: ‘ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚುತ್ತಿರುವ ‘ಕೋವಿಡ್‌ 19‘ ಪ್ರಕರಣಗಳ ಸಂಖ್ಯೆ ಬಗ್ಗೆ ನಮ್ಮ ಸರ್ಕಾರ ನಿಗಾ ಇಟ್ಟಿದ್ದರೂ, ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸುವ ಕುರಿತು ನಿರ್ಧಾರ ತೆಗೆದುಕೊಂಡಿಲ್ಲ‘ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೋವಾದಲ್ಲಿ ಪ್ರತಿನಿತ್ಯ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ವಾರಗಳ ಹಿಂದಿನ ಅವಧಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಎಂಟು ಪಟ್ಟು ಏರಿಕೆಯಾಗಿದೆ. ಆದ್ದರಿಂದ ಗೋವಾಕ್ಕೆ ಭೇಟಿ ನೀಡುವವರು ಮತ್ತು ಸ್ಥಳೀಯರು ಕೋವಿಡ್ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು‘ ಎಂದು ಮನವಿ ಮಾಡಿದ್ದಾರೆ.

‘ಕೊರೊನಾ ಸೋಂಕು ನಿಯಂತ್ರಿಸುವುದು ನಾಗರಿಕರು ಮತ್ತು ಸರ್ಕಾರದ ಕರ್ತವ್ಯ. ಸರ್ಕಾರ ಸೋಂಕಿನ ಪ್ರಕರಣಗಳ ಪರೀಕ್ಷೆ ಹೆಚ್ಚಿಸಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗುವ ಜತೆಗೆ ಸರ್ಕಾರದ ಜತೆ ಕೈ ಜೋಡಿಸಬೇಕು‘ ಎಂದು ಸಾವಂತ್ ಹೇಳಿದರು.

ADVERTISEMENT

‘ಗೋವಾದಲ್ಲಿ ಪ್ರತಿನಿತ್ಯ ಸರಾಸರಿ 250 ಪ್ರಕರಣಗಳು ವರದಿಯಾಗುತ್ತಿವೆ. ಸೋಂಕು ಏರಿಕೆ ತಡೆಗೆ ಜನರ ಸಹಕಾರ ಅಗತ್ಯ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯಕ್ಕೆ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದೇವೆ‘ ಎಂದು ಸಾವಂತ್ ಹೇಳಿದರು.

ಗೋವಾದಲ್ಲಿ ಭಾನುವಾರ 265 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಎರಡು ತಿಂಗಳ ಹಿಂದೆಯೇ, ಕರಾವಳಿ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸರಾಸರಿ ಪ್ರಮಾಣವು 30 ರಿಂದ 40 ರ ನಡುವೆ ಇತ್ತು. ಸಕ್ರಿಯ ಪ್ರಕರಣಗಳ 2ಸಾವಿರದ ಗಡಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.