ADVERTISEMENT

ಕೋವಿಡ್-19 ಆಸ್ಪತ್ರೆ: ಅಗ್ನಿ ಸುರಕ್ಷತೆ ಆಡಿಟ್ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 20:40 IST
Last Updated 20 ಡಿಸೆಂಬರ್ 2020, 20:40 IST
   

ನವದೆಹಲಿ: ಪ್ರತಿ ಜಿಲ್ಲೆಯ ಎಲ್ಲ ಕೋವಿಡ್ ಆಸ್ಪತ್ರೆಗಳಲ್ಲಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಅಗ್ನಿ ಸುರಕ್ಷತೆ ಆಡಿಟ್ ನಡೆಸುವಂತೆ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಜತೆಗೆ, ಅಗ್ನಿ ಸುರಕ್ಷತೆ ನಿರ್ವಹಣೆಯ ಲೋಪದೋಷ ನಿವಾರಣೆಗೆ ಏನು ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ವರದಿ ನೀಡುವಂತೆಯೂ ಸೂಚಿಸಿದೆ.

‘ಪ್ರತಿ ಕೋವಿಡ್ ಆಸ್ಪತ್ರೆಯಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿಕೊಳ್ಳಬೇಕು. ಎಲ್ಲಾ ಅಗ್ನಿಶಾಮಕ ಸುರಕ್ಷತಾ ಕ್ರಮಗಳ ಪಾಲನೆಯನ್ನು ಖಾತರಿಪಡಿಸುವ ಜವಾಬ್ದಾರಿ ಈ ಅಧಿಕಾರಿಯ ಮೇಲಿರುತ್ತದೆ’ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ತಿಳಿಸಿತು.

ಕೋವಿಡ್ ಆಸ್ಪತ್ರೆಗಳು ಆಯಾ ರಾಜ್ಯಗಳ ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಪಡೆಯುವುದು ಕಡ್ಡಾಯ. ಈವರೆಗೆ ಪಡೆದಿಲ್ಲವಾದರೆ, ತಕ್ಷಣವೇ ಅರ್ಜಿ ಹಾಕಬೇಕು ಎಂದು ಕೋರ್ಟ್‌ ತಿಳಿಸಿದೆ. ‘ಒಂದು ವೇಳೆ, ಕೋವಿಡ್ ಆಸ್ಪತ್ರೆಯಲ್ಲಿ ಎನ್‌ಒಸಿ ಇಲ್ಲದಿದ್ದರೆ ಅಥವಾ ಅದು ನವೀಕರಣ ಆಗದಿದ್ದಲ್ಲಿ ರಾಜ್ಯಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರ್ಟ್ ಎಚ್ಚರಿಸಿದೆ.

ADVERTISEMENT

ನ. 26ರಂದು ರಾಜ್‌ಕೋಟ್‌ನ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡಪ್ರಕರಣವನ್ನು ಕೋರ್ಟ್ ಸ್ವಯಂಪ್ರೇರಿತ ವಿಚಾರಣೆಗೆ ಕೈಗೆತ್ತಿಕೊಂಡಿದೆ. ನ್ಯಾಯ ಮೂರ್ತಿ ಡಿ.ಎ. ಮೆಹ್ತಾ ಆಯೋಗ ಈ ಬಗ್ಗೆ ತನಿಖೆ ನಡೆಸುತ್ತಿದೆ. ಆಗಸ್ಟ್‌ನಲ್ಲಿ ಅಹಮದಾಬಾದ್‌ನ ಶ್ರೇಯ್ ಆಸ್ಪತ್ರೆಯಲ್ಲಿ ನಡೆದ ಅವಘಡದಲ್ಲಿ 8 ರೋಗಿ ಗಳು ಮೃತಪಟ್ಟಿದ್ದರು. ರಾಜ್‌ಕೋಟ್‌ನಉದಯ್ ಶಿವಾನಂದ ಆಸ್ಪತ್ರೆಯ ಅಗ್ನಿಅವಘಡಕ್ಕೆ ಐವರು ಬಲಿಯಾದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಮಿತಿಗೆ ಕೋರ್ಟ್ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.