ಮುಂಬೈ: ಬಳ್ಳಾರಿಯ ಉಕ್ಕಿನ ಘಟಕದಿಂದ ಪಶ್ಚಿಮ ಮಹಾರಾಷ್ಟ್ರಕ್ಕೆ ಆಮ್ಲಜನಕದ ಸರಬರಾಜನ್ನು ನೆರೆಯ ಕರ್ನಾಟಕ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಮಹಾರಾಷ್ಟ್ರದ ಸಚಿವ ಸತೇಜ್ ಪಾಟೀಲ್ ಶನಿವಾರ ಆರೋಪಿಸಿದ್ದು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕೊಲ್ಹಾಪುರ ಹಾಗೂ ಇತರೆ ಜಿಲ್ಲೆಗಳಲ್ಲಿ ಕರ್ನಾಟಕದಿಂದ ಉಂಟಾಗುವ ಆಮ್ಲಜನಕದ ಅಡಚಣೆ ದುರದೃಷ್ಟಕರ ಎಂದು ಗೃಹ ಖಾತೆ ರಾಜ್ಯ ಸಚಿವ ಪಾಟೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಾಣಿ ಹಾನಿ ತಪ್ಪಿಸಲು ಆಮ್ಲಜನಕ ಸರಬರಾಜು ಅಸ್ತವ್ಯಸ್ತವಾಗದಂತೆ ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.
ಮಹಾರಾಷ್ಟ್ರಕ್ಕೆ ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರವು 50 ಟನ್ ಆಮ್ಲಜನಕ ಪೂರೈಸುವುದನ್ನು ಕರ್ನಾಟಕ ಸರ್ಕಾರವು ಅಡ್ಡಿಪಡಿಸಿದೆ. ಇದರಿಂದ ಕೋಲ್ಹಾಪುರ, ಸಾಂಗ್ಲಿ, ಸತಾರಾ, ಸಿಂಧುದುರ್ಗ್ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಆಮ್ಲಜನಕ ಕೊರತೆಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ತೀವ್ರವಾಗಿ ಹೆಚ್ಚಿದ್ದು, ದೇಶದ ಅನೇಕ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಿಲ್ಲೆಯಲ್ಲಿ 14 ಆಮ್ಲಜನಕ ಘಟಕವನ್ನು ಸ್ಥಾಪಿಸಲಾಗುವುದು ಎಂದು ಕೊಲ್ಹಾಪುರ ಉಸ್ತುವಾರಿ ಸಚಿವರೂ ಆಗಿರುವ ಪಾಟೀಲ್ ತಿಳಿಸಿದ್ದಾರೆ.
ಹೊಸ ಘಟಕಗಳು 23 ಟನ್ ಆಮ್ಲಜನಕವನ್ನು ಉತ್ಪಾದಿಸಲಿದ್ದು, ಪ್ರತಿದಿನ 1,800 ಸಿಲಿಂಡರ್ಗಳನ್ನು ಪುನಃ ಭರ್ತಿಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.