ADVERTISEMENT

ಲಸಿಕೆ ಕೊರತೆ: ಮಹಾರಾಷ್ಟ್ರ ವಿರುದ್ಧ ಕೇಂದ್ರದ ಕಿಡಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 1:50 IST
Last Updated 8 ಏಪ್ರಿಲ್ 2021, 1:50 IST
ಹರ್ಷವರ್ಧನ್‌
ಹರ್ಷವರ್ಧನ್‌   

ನವದೆಹಲಿ:ಲಸಿಕೆಬಗ್ಗೆ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಕಿಡಿಕಾರಿದ್ದಾರೆ.

’ಇಂತಹ ಆರೋಪಗಳು ಸಂಪೂರ್ಣ ಆಧಾರರಹಿತವಾಗಿವೆ. ಇದು ಸೋಮಾರಿತನದ ನಡವಳಿಕೆಯಾಗಿದೆ. ಜತೆಗೆ, ವೈರಸ್‌ ವಿರುದ್ಧದ ಹೋರಾಟವನ್ನು ಕುಗ್ಗಿಸುವ ಪ್ರಯತ್ನವೂ ಇದಾಗಿದೆ’ ಎಂದು ಬುಧವಾರ ಹೇಳಿದ್ದಾರೆ.

‘ಲಸಿಕೆ ಕೊರತೆ ಬಗ್ಗೆ ಮಹಾರಾಷ್ಟ್ರದ ಜನಪ್ರತಿನಿಧಿಗಳು ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಸಾಂಕ್ರಾಮಿಕ ಕಾಯಿಲೆ ಹಬ್ಬುತ್ತಿರುವುದನ್ನು ನಿಯಂತ್ರಿಸಲು ಪದೇ ಪದೇ ವಿಫಲವಾಗಿರುವ ಮಹಾರಾಷ್ಟ್ರ ಸರ್ಕಾರ, ಗಮನವನ್ನು ಬೇರೆಡೆ ಸೆಳೆಯಲು ಇಂತಹ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಜನರಲ್ಲಿ ಆತಂಕವನ್ನು ಮೂಡಿಸಲಾಗುತ್ತಿದೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ಮಹಾರಾಷ್ಟ್ರದಲ್ಲಿನ ದುರಾಡಳಿತ ಮತ್ತು ನಿರ್ಲಕ್ಷ್ಯದ ಧೋರಣೆಯಿಂದ ವೈರಸ್‌ ಹಬ್ಬುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಪ್ರಯತ್ನದ ಕೊರತೆ ಈಗ ಸ್ಪಷ್ಟವಾಗಿ ಕಾಣಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್‌–19 ನಿಯಂತ್ರಿಸಲು ವಿಫಲವಾಗಿರುವ ಛತ್ತೀಸಗಡ ಮತ್ತು ದೆಹಲಿ ಸರ್ಕಾರಗಳ ಧೋರಣೆಯನ್ನು ಸಹ ಅವರು ಟೀಕಿಸಿದ್ದಾರೆ. ಕರ್ನಾಟಕ, ಪಂಜಾಬ್‌, ರಾಜಸ್ಥಾನ ಮತ್ತು ಗುಜರಾತ್‌ನಲ್ಲೂ ಹಲವು ಕೊರತೆಗಳಿವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಪರೀಕ್ಷಾ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ ಎಂದು ಸೂಚಿಸಿದ್ದಾರೆ.

ಛತ್ತೀಸಗಡ ಸರ್ಕಾರ ಭಾರತ್‌ ಬಯೊಟೆಕ್‌ನ ಕೊವ್ಯಾಕ್ಸಿನ್‌ ಬಳಸಲು ನಿರಾಕರಿಸಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.