ADVERTISEMENT

ಹಬ್ಬದ ಸಮಯ ಶೇ 28 ಮಂದಿ ಪ್ರಯಾಣಕ್ಕೆ ಸಿದ್ಧತೆ: 3ನೇ ಅಲೆಯ ಅಪಾಯ ಹೆಚ್ಚು– ಸಮೀಕ್ಷೆ

ಪಿಟಿಐ
Published 26 ಜುಲೈ 2021, 5:55 IST
Last Updated 26 ಜುಲೈ 2021, 5:55 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ಪ್ರಮುಖ ಹಬ್ಬಗಳ ಸಮಯವಾದ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಶೇಕಡಾ 28 ರಷ್ಟು ಭಾರತೀಯರು ಪ್ರವಾಸಕ್ಕೆ ಯೋಜಿಸುತ್ತಿರುವುದರಿಂದ, ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಅಪಾಯವು ಏರಿಕೆಯಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಆನ್‌ಲೈನ್ ಪೋರ್ಟಲ್ ಲೋಕಲ್ ಸರ್ಕಲ್ಸ್ ಏಪ್ರಿಲ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಎರಡನೇ ಅಲೆಯ ಸಂದರ್ಭ ಪ್ರಯಾಣ ನಿರ್ಬಂಧಗಳನ್ನು ವಿಧಿಸಲು ಸರ್ಕಾರಗಳಿಗೆ ಸೂಚಿಸಿದ್ದಾಗಿ ಹೇಳಿದೆ.

ಅದೇ ರೀತಿ, ಸಂಭಾವ್ಯ ಕೋವಿಡ್ -19 ಮೂರನೇ ಅಲೆಯ ಸೂಚನೆ ಹಿನ್ನೆಲೆಯಲ್ಲಿ ಮುಂಬರುವ ತಿಂಗಳುಗಳಲ್ಲಿ ಜನರ ಪ್ರಯಾಣದ ಯೋಜನೆಗಳನ್ನು ಅರ್ಥಮಾಡಿಕೊಳ್ಳಲು, ಲೋಕಲ್ ಸರ್ಕಲ್ಸ್ ಮತ್ತೊಂದು ಸಮೀಕ್ಷೆಯನ್ನು ನಡೆಸಿದೆ. ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ಅವರ ಪ್ರಯಾಣದ ಕಾರಣವನ್ನು ಅರ್ಥಮಾಡಿಕೊಳ್ಳಲು ಸಹ ಇದು ಪ್ರಯತ್ನಿಸಿದೆ ಎಂದು ಅದು ಹೇಳಿದೆ.

ADVERTISEMENT

ಸಮೀಕ್ಷೆಯು 311 ಜಿಲ್ಲೆಗಳಲ್ಲಿ ವಾಸಿಸುವ ಶೇಕಡಾ 68 ರಷ್ಟು ಪುರುಷರು ಮತ್ತು ಮಹಿಳೆಯರು ಸೇರಿ 18,000ಕ್ಕೂ ಹೆಚ್ಚು ನಾಗರೀಕರಿಂದ ಪ್ರತಿಕ್ರಿಯೆಗಳನ್ನು ಪಡೆದಿದೆ. .

ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ 28 ಪ್ರತಿಶತದಷ್ಟು ನಾಗರಿಕರು ಬೇರೆ ಊರುಗಳಿಗೆ ಪ್ರಯಾಣಕ್ಕೆ ಯೋಜಿಸುತ್ತಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ತಿಳಿಸಿದೆ. ಆದರೆ, ಕೇವಲ ಐದು ಪ್ರತಿಶತದಷ್ಟು ಜನರು ಮಾತ್ರ ತಮ್ಮ ಬುಕಿಂಗ್ ಮಾಡಿದ್ದಾರೆ. ಎರಡನೇ ಅಲೆಯ ಸಂಧರ್ಭ ಅನೇಕರು ಬೇಸಿಗೆಯಲ್ಲಿ ತಮ್ಮ ಪ್ರಯಾಣ ಯೋಜನೆಯನ್ನು ರದ್ದುಗೊಳಿಸಲು ಪಾವತಿಸಿದ ಹಣದ ಮರುಪಾವತಿ ಸಮಸ್ಯೆಗಳನ್ನು ಎದುರಿಸಿದರು.

ಅನೇಕ ಸಂದರ್ಭಗಳಲ್ಲಿ, ಟ್ರಾವೆಲ್ ಏಜೆಂಟ್ ಅಥವಾ ವಿಮಾನಯಾನ ಸಂಸ್ಥೆ ಪಾವತಿಸಿದ ಹಣವನ್ನು ಮರುಪಾವತಿಸಲಿಲ್ಲ, ಕೆಲವು ನಾಗರಿಕರು ಸಂಪೂರ್ಣ ಟಿಕೆಟ್ ಮೊತ್ತವನ್ನು ಕಳೆದುಕೊಂಡರೆ, ಮತ್ತೆ ಕೆಲವರು ಭಾಗಶಃ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಯಿತು. ಇತರರಿಗೆ ಟಿಕೆಟ್ ಅನ್ನು ಮರು ಬುಕ್ ಮಾಡಲು ನಂತರದ ದಿನಾಂಕಕ್ಕೆ ಅವಕಾಶ ನೀಡಲಾಗಿತ್ತು.

ಸೆಪ್ಟೆಂಬರ್ ಸಮಯದಲ್ಲಿ, ದೇಶದ ಹಲವು ಭಾಗಗಳಲ್ಲಿ ಹಬ್ಬಗಳಿಗೆ ರಜಾದಿನಗಳಿವೆ. ಈ ಸಂದರ್ಭ ಜನರ ಪ್ರಯಾಣವು ಹೆಚ್ಚಾಗುತ್ತದೆ. ಅನೇಕರು ಈ ರಜಾದಿನಗಳನ್ನು ವಾರಾಂತ್ಯದಲ್ಲಿ ಒಂದು ಅಥವಾ ಎರಡು ದಿನ ರಜೆ ತೆಗೆದುಕೊಳ್ಳುವ ಮೂಲಕ ಕ್ಲಬ್ ಮಾಡಿಕೊಂಡು ಪ್ರವಾಸಕ್ಕೆ ಒಲವು ತೋರುತ್ತಾರೆ ಎಂದು ಸಮೀಕ್ಷೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.