ಭುವನೇಶ್ವರ: ಕೊರೊನಾ ಸೋಂಕು ನಿಯಂತ್ರಣದ ಕ್ರಮಗಳ ಜಾರಿಗೆ ತರುವಲ್ಲಿಯೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಆರೋಗ್ಯ ಸಿಬ್ಬಂದಿಗೆ ಸಹಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಕೋವಿಡ್ನಿಂದ ಸಾವಿಗೀಡಾದರೆ, ಕುಟುಂಬಕ್ಕೆ ಪಿಂಚಣಿ ನೀಡುವುದಾಗಿ ಒಡಿಶಾ ಸರ್ಕಾರ ಗುರುವಾರ ಪ್ರಕಟಿಸಿದೆ.
ಕೋವಿಡ್–19 ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು ಕೋವಿಡ್ನಿಂದ ಮೃತಪಟ್ಟರೆ, ಅವರ ಕುಟುಂಬದವರಿಗೆ ಮಾಸಿನ ₹7,500 ಪಿಂಚಣಿ ಸಿಗಲಿದೆ. ಆಶಾ ಕಾರ್ಯಕರ್ತರು ಸಾವಿಗೀಡಾದರೆ, ಅವರ ಕುಟುಂಬದವರಿಗೆ ಮಾಸಿಕ ₹5,000 ಪಿಂಚಣಿ ಸರ್ಕಾರ ನೀಡಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಕೋವಿಡ್–19 ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಇದು ಅನ್ವಯವಾಗಲಿದೆ. ಕಾರ್ಯಕರ್ತೆಯರು ಕರ್ತವ್ಯದ ನಡುವೆ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ಸಾವಿಗೀಡಾದರೆ; ಅವರ ವಯಸ್ಸು 60 ವರ್ಷ ತಲುಪಲು ಇದ್ದ ಸೇವಾವಧಿಯ ಆಧಾರದ ಮೇಲೆ ಅಷ್ಟು ವರ್ಷಗಳ ವರೆಗೂ ಕುಟುಂಬದವರಿಗೆ ಪಿಂಚಣಿ ಸಿಗಲಿದೆ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್ಆರ್ಸಿ) ಹೊರಡಿಸಿರುವು ಆದೇಶದಿಂದ ತಿಳಿದು ಬಂದಿದೆ.
ರಾಜ್ಯದ ಹಣಕಾಸು ಇಲಾಖೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಿಷನ್ ಶಕ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಚರ್ಚಿಸಿ ವಿವರವಾದ ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.