ಭೋಪಾಲ್: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎಂಬ ಬೇಡಿಕೆಗೆ ಮತ್ತಷ್ಟು ಬಲ ಬಂದಿದೆ. ಮಧ್ಯ ಪ್ರದೇಶದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಅವರನ್ನು ಕಣಕ್ಕೆ ಇಳಿಸಬೇಕು ಎಂದು ಆ ಪಕ್ಷದ ಮಧ್ಯ ಪ್ರದೇಶದ ನಾಲ್ವರು ಮುಖಂಡರು ಒತ್ತಾಯಿಸಿದ್ದಾರೆ.
ರಾಜ್ಯಸಭೆಯಲ್ಲಿ ಆ ರಾಜ್ಯದ ಮೂರು ಸ್ಥಾನಗಳು ಏಪ್ರಿಲ್ನಲ್ಲಿ ತೆರವಾಗಲಿವೆ. ಅವುಗಳ ಪೈಕಿ ಒಂದನ್ನು ಕಾಂಗ್ರೆಸ್ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರು ಪ್ರತಿನಿಧಿಸುತ್ತಿದ್ದಾರೆ. ಉಳಿದ ಎರಡು ಸ್ಥಾನಗಳಲ್ಲಿ ಬಿಜೆಪಿಯ ಮುಖಂಡರಿದ್ದಾರೆ.
2018ರಲ್ಲಿ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಪಡೆದಿರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಎರಡು ಸ್ಥಾನಗಳು ದೊರೆಯುವ ಸಾಧ್ಯತೆ ಇದೆ.ಮಧ್ಯ ಪ್ರದೇಶದಿಂದ ಪ್ರಿಯಾಂಕಾ ಅವರನ್ನು ರಾಜ್ಯಸಭೆ ಚುನಾವಣೆಗೆ ನಿಲ್ಲಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಅರುಣ್ ಯಾದವ್, ಮಧ್ಯ ಪ್ರದೇಶದ ಸಚಿವರಾದ ಸಜ್ಜನ್ ಸಿಂಗ್ ವರ್ಮಾ, ಪಿ.ಸಿ. ಶರ್ಮಾ ಮತ್ತು ಜೈವರ್ಧನ್ ಸಿಂಗ್ ಅವರು ಆಗ್ರಹಿಸಿದ್ದಾರೆ.
‘ಪಕ್ಷದ ಚುಕ್ಕಾಣಿಯನ್ನು ರಾಹುಲ್ ಗಾಂಧಿ ಕೈಗೆ ಮತ್ತೆ ನೀಡಬೇಕು. ಪ್ರಿಯಾಂಕಾ ಅವರು ರಾಜ್ಯಸಭೆಯಲ್ಲಿ ಮಧ್ಯ ಪ್ರದೇಶವನ್ನು ಪ್ರತಿನಿಧಿಸಬೇಕು. ಇದು ಧರ್ಮಾಂಧತೆಯ ಸಿದ್ಧಾಂತದ ವಿರುದ್ಧದ ಹೋರಾಟದಲ್ಲಿ ನೆರವಾಗಲಿದೆ’ ಎಂದು ಅರುಣ್ ಯಾದವ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.