ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ –2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಜನರ ವಿರೋಧದ ನಡುವೆಯೂ ಮಸೂದೆ ಪರಿಶೀಲನೆಗೆ ನೇಮಕವಾಗಿದ್ದ ಜಂಟಿ ಸಂಸದೀಯ ಸಮಿತಿಯ ಆಕ್ಷೇಪಗಳು ಮತ್ತು ಇತರರ ಅಭಿಪ್ರಾಯಗಳನ್ನು ಪರಿಗಣಿಸದೆ ಕೇಂದ್ರವು ಕಾಯ್ದೆಗೆ ಅನುಮೋದನೆ ನೀಡಿದೆ ಎಂದು ಸಿಪಿಐ ವಾದಿಸಿದೆ.
ರಾಷ್ಟ್ರಪತಿ ಒಪ್ಪಿಗೆಯ ನಂತರ ಏಪ್ರಿಲ್ 5ರಂದು ಪ್ರಕಟವಾದ ತಿದ್ದುಪಡಿ ಕಾಯ್ದೆಯು ವಕ್ಫ್ ಮಂಡಳಿಯ ಸ್ವಾಯತ್ತತೆಯನ್ನು ಗಣನೀಯವಾಗಿ ಮೊಟಕುಗೊಳಿಸುತ್ತದೆ ಮತ್ತು 1995ರ ವಕ್ಫ್ ಕಾಯ್ದೆಯ ಚೌಕಟ್ಟನ್ನು ಮೂಲಭೂತವಾಗಿ ಪರಿವರ್ತಿಸುತ್ತದೆ ಎಂದು ವಕೀಲ ರಾಮ್ ಶಂಕರ್ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ವಾದಿಸಲಾಗಿದೆ.
ಇದು ವಕ್ಫ್ ಮಂಡಳಿಯ ಆಡಳಿತದ ಮೇಲೆ ಕೇಂದ್ರ ಸರ್ಕಾರಕ್ಕೆ ಅನಿಯಂತ್ರಿತ ಅಧಿಕಾರವನ್ನು ನೀಡುತ್ತದೆ. ಇದರಿಂದಾಗಿ ಸಂವಿಧಾನದ 25, 26 ಮತ್ತು 29 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಸಿಪಿಐ ಹೇಳಿದೆ.
ಈ ಹಿಂದೆ, ಕಾಯ್ದೆಯ ಲೋಪಗಳನ್ನು ಉಲ್ಲೇಖಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.