ADVERTISEMENT

ರಾಹುಲ್‌ ರಾಜೀನಾಮೆ, ತಿರಸ್ಕಾರದ ಸುದ್ದಿ ಅಲ್ಲಗಳೆದ ಕಾಂಗ್ರೆಸ್‌

ಏಜೆನ್ಸೀಸ್
Published 25 ಮೇ 2019, 16:00 IST
Last Updated 25 ಮೇ 2019, 16:00 IST
   

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಳಪೆ ಸಾಧನೆಯ ಹೊಣೆಹೊತ್ತು ಪಕ್ಷದ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡುವ ರಾಹುಲ್ ಗಾಂಧಿ ಅವರ ಇಂಗಿತವನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯು ಒಮ್ಮತದಿಂದ ತಿರಸ್ಕರಿಸಿದೆ.ಆದರೆ ಅಧ್ಯಕ್ಷನ ಸ್ಥಾನದಿಂದ ಇಳಿಯುವ ತಮ್ಮ ನಿರ್ಧಾರದಿಂದ ಹಿಂದೆಸರಿಯುವ ಬಗ್ಗೆ ರಾಹುಲ್ ಯಾವುದೇ ಖಾತರಿ ನೀಡಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.

‘ಈ ಸೋಲಿನ ಹೊಣೆ ನನ್ನದೇ. ಈ ಕಾರಣದಿಂದ ಪಕ್ಷದ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಮತ್ತು ನೆಹರೂ–ಗಾಂಧಿ ಕುಟುಂಬದ ಯಾರೂ ಪಕ್ಷವನ್ನು ಮುನ್ನಡೆಸುವುದು ಬೇಡ ಎಂದು ರಾಹುಲ್ ಹೇಳಿದರು’ ಎಂದು ಪಕ್ಷದ ಮೂಲಗಳು ಹೇಳಿವೆ.

ಶನಿವಾರ ಇಲ್ಲಿ ನಾಲ್ಕು ತಾಸು ನಡೆದಸಭೆಯಲ್ಲಿ ರಾಹುಲ್ ಗಾಂಧಿ, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು. ಸಭೆಯ ನಂತರ ಪಕ್ಷದ ಹಿರಿಯ ನಾಯಕರು ಮಾಧ್ಯಮಗೋಷ್ಠಿ ನಡೆಸಿ, ಸಮಿತಿಯ ನಿರ್ಧಾರಗಳನ್ನು ಪ್ರಕಟಿಸಿದರು.

ADVERTISEMENT

‘ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಪಕ್ಷಕ್ಕೆ ನಂಬಿಕೆಯಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಅವರ ಮುಂದಾಳತ್ವ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಪಕ್ಷವನ್ನು ತಳಮಟ್ಟದಿಂದ ಮರುಸಂಘಟಿಸುವಂತೆ ಅವರನ್ನು ಕೇಳಿಕೊಳ್ಳಲಾಗಿದೆ’ ಎಂದು ಸಮಿತಿಯು ಹೇಳಿದೆ.

ಆದರೆ ರಾಹುಲ್ ತಮ್ಮ ನಿರ್ಧಾರದಿಂದ ಹಿಂದೆಸರಿಯುವ ಬಗ್ಗೆ ಯಾವುದೇ ಖಾತರಿ ದೊರೆತಿಲ್ಲ. ಅವರನ್ನು ಮನವೊಲಿಸುವ ಸಲುವಾಗಿ ಮತ್ತೊಮ್ಮೆ ಸಭೆ ನಡೆಸುವ ಬಗ್ಗೆ ಪಕ್ಷದ ಹಿರಿಯ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.