ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ‘ಮಾಂಡೂಸ್’ ಚಂಡಮಾರುತ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ ಪರಿಣಾಮ ಈ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಚೆನ್ನೈನಲ್ಲಿ ಚಂಡಮಾರುತದ ಪರಿಣಾಮ ದೊಡ್ಡ ದೊಡ್ಡ ಮರಗಳು ಧರೆಗೆ ಉರುಳಿವೆ. ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ್ದು ಜನ ಜೀವನ ಆಸ್ತವ್ಯಸ್ತವಾಗಿದೆ.
ಮಧ್ಯಾರಾತ್ರಿ 1.30ರ ಸುಮಾರಿಗೆ ಚಂಡಮಾರುತ ಕರಾವಳಿಗೆ ಅಪ್ಪಳಿಸಿತು. ಗಂಟೆಗೆ 75 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಚಂಡಮಾರುತ ಕರ್ನಾಟಕದ ಕರಾವಳಿ ಪಕ್ಕದಲ್ಲೂ ಹಾದು ಹೋಗುತ್ತಿದ್ದು ರಾಜ್ಯದಲ್ಲೂ ಮಳೆಯಾಗುತ್ತಿದೆ.
ತಮಿಳುನಾಡಿನ ಚೆಂಗಲ್ಪೇಟೆ, ನಾಗಪಟ್ಟಣಂ ಸೇರಿ ಕರಾವಳಿ ಪ್ರದೇಶ,ಉತ್ತರ ಒಳನಾಡು, ಕೊಡೈಕೆನಾಲ್, ಪುದುಚೇರಿ, ರಾಯಲಸೀಮಾ ಮತ್ತು ದಕ್ಷಿಣ ಆಂಧ್ರಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ.
ಚಂಡಮಾರುತ ಬಾಧಿತ ಪ್ರದೇಶಗಳ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.ತಮಿಳುನಾಡಿನ ಕರಾವಳಿ ಮತ್ತು ಪುದುಚೇರಿಯಲ್ಲಿ ಶನಿವಾರವೂ ಶಾಲಾ ಕಾಲೇಜುಗಳಿಗೆ ಪ್ರಾದೇಶಿಕ ಆಡಳಿತ ರಜೆ ಘೋಷಿಸಿದೆ.
ವಾಯುವ್ಯ ದಿಕ್ಕಿನತ್ತ ಚಲಿಸುತ್ತಿರುವ ಚಂಡಮಾರುತವು, ಮಹಾಬಲಿಪುರಂ, ಪುದುಚೇರಿ, ಕಾರೈಕಲ್ ದಕ್ಷಿಣ ಆಂಧ್ರಪ್ರದೇಶದ ಕರಾವಳಿ, ಶ್ರೀಹರಿಕೋಟಾದಲ್ಲಿ ಮಳೆ ತರಲಿದೆ. ಚಂಡಮಾರುತದ ಮೇಲೆ ಡಾಪ್ಲರ್ ವೆದರ್ ರೆಡಾರ್ಗಳ ಮೂಲಕ ನಿಗಾವಹಿಸಲಾಗಿದೆ. 24 ತಾಸುಗಳಲ್ಲಿ ಚಂಡಮಾರುತ ದುರ್ಬಲವಾಗಲಿದೆ ಎಂದು ಐಎಂಡಿ ಹೇಳಿದೆ.
ಚೆಂಗಲ್ಪೇಟೆ, ವಿಲ್ಲುಪುರಂ ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾವೇರಿ ಕಣಿವೆ ಸೇರಿ ಕರಾವಳಿಯಲ್ಲಿ ರಕ್ಷಣಾ ಕಾರ್ಯಕ್ಕಾಗಿ ಎನ್ಡಿಆರ್ಎಫ್ ಮತ್ತು ಎಸ್ಟಿಆರ್ಎಫ್ ಒಳಗೊಂಡ ವಿಪತ್ತು ಸ್ಪಂದನಾ ಪಡೆಗಳನ್ನು ತಮಿಳುನಾಡು ಸರ್ಕಾರ ನಿಯೋಜಿಸಿದೆ.
‘ಮಾಂಡೂಸ್’ ಚಂಡಮಾರುತಕ್ಕೆ ಅರೆಬಿಕ್ ಹೆಸರು
‘ಮಾಂಡೂಸ್’ ಅರೆಬಿಕ್ ಮೂಲದ ಪದ. ಮಾಂಡೂಸ್ ಎಂದರೆ ‘ಟ್ರೆಷರ್ ಬಾಕ್ಸ್ (ಖಜಾನೆ ಪೆಟ್ಟಿಗೆ)’ ಎನ್ನುವ ಅರ್ಥವಿದೆ. ‘ಮ್ಯಾನ್-ಡೌಸ್’ ಎಂದೂ ಉಚ್ಚರಿಸಲಾಗುತ್ತದೆ. ಇದು ಬಂಗಾಳಕೊಲ್ಲಿಯಲ್ಲಿ ರೂಪುಗೊಂಡು ನಿಧಾನವಾಗಿ ಚಲಿಸುವ ಮತ್ತು ಬಹಳಷ್ಟು ತೇವಾಂಶ ಹೀರಿಕೊಳ್ಳುವ ಈ ಚಂಡಮಾರುತಕ್ಕೆ‘ಮಾಂಡೂಸ್’ ಹೆಸರನ್ನು ಅರಬ್ ಸಂಯುಕ್ತ ಸಂಸ್ಥಾನವು (ಯುಎಇ) ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.