ರಾಂಚಿ: ಗುರುವಾರ ಬೆಳಿಗ್ಗಿನ ಜಾವ ಹಾದು ಹೋದ ಯಸ್ ಚಂಡಮಾರುತದಿಂದಾಗಿ ಜಾರ್ಖಂಡ್ನಲ್ಲಿ ಎಂಟು ಲಕ್ಷ ಜನ ತೊಂದರೆಗೆ ಒಳಗಾಗಿದ್ದಾರೆ. ರಾಜಧಾನಿ ರಾಂಚಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
15 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಖಾರ್ಖಾಯ್ ಮತ್ತು ಸುವರ್ಣರೇಖಾ ಸೇರಿ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಾಗಾಗಿ, ಪೂರ್ವ ಸಿಂಘ್ಭೂಮ್ ಜಿಲ್ಲೆಯಲ್ಲಿ ಜನರ ಸ್ಥಳಾಂತರ ಕಾರ್ಯಾಚರಣೆ ಗುರುವಾರವೂ ನಡೆದಿದೆ.ಜಾರ್ಖಂಡ್ನಲ್ಲಿ ಗುರುವಾರ ಮತ್ತು ಶುಕ್ರವಾರ ಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ.
ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.ಜಾರ್ಖಂಡ್ನಲ್ಲಿ ಚಂಡಮಾರುತವು ಈ ರೀತಿಯ ಪರಿಣಾಮ ಬೀರಿದ್ದು ಇದೇ ಮೊದಲು. 500 ತಂಡಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.
ಮಕ್ಕಳಿಗೆ ‘ಯಸ್’ ಹೆಸರು: ಯಸ್ ಚಂಡಮಾರುತವು ಒಡಿಶಾ ಕರಾವಳಿಯನ್ನು ಅಪ್ಪಳಿಸಿದ ದಿನ ರಾಜ್ಯದಲ್ಲಿ 300ಕ್ಕೂ ಹೆಚ್ಚು ಮಕ್ಕಳು ಜನಿಸಿದ್ದಾರೆ. ಅಂದು ಜನಿಸಿದ ಮಕ್ಕಳಿಗೆ ಚಂಡಮಾರುತದ ಹೆಸರನ್ನೇ ಇರಿಸಲು ಹಲವು ಕುಟುಂಬಗಳು ಮುಂದಾಗಿವೆ.
ಬುಧವಾರ ಜನಿಸಿದ ತಮ್ಮ ಗಂಡು ಮಗುವಿಗೆ ‘ಯಸ್’ಗಿಂತ ಒಳ್ಳೆಯ ಹೆಸರು ಯಾವುದಿದೆ ಎಂದು ಬಾಲಸೋರ್ನ ಪರಖಿ ಪ್ರದೇಶದ ನಿವಾಸಿ ಸೋನಾಲಿ ಮೈತಿ ಪ್ರಶ್ನಿಸುತ್ತಾರೆ.ಕೇಂದ್ರಪಾಡ ಜಿಲ್ಲೆಯ ಸರಸ್ವತಿ ಬೈರಾಗಿ ಅವರು ಕೂಡ ಚಂಡಮಾರುತ ಅಪ್ಪಳಿಸಿದ ದಿನವೇ ಜನಿಸಿದ ತಮ್ಮ ಹೆಣ್ಣು ಮಗುವಿಗೆ ‘ಯಸ್’ ಎಂದುಹೆಸರಿಟ್ಟಿದ್ದಾರೆ. ಯಸ್ ಎಂಬುದು ಪರ್ಷಿಯಾ ಪದವಾಗಿದ್ದು, ಮಲ್ಲಿಗೆ ಎಂದು ಅರ್ಥ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.