ನವದೆಹಲಿ: ಯಸ್ ಚಂಡಮಾರುತದ ಹೊಡೆತಕ್ಕೆ ಸಿಲುಕುವ ಪ್ರದೇಶಗಳಲ್ಲಿ ಜನರ ನೆರವಿಗೆ ಧಾವಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಯಲ್ಲಿ ಬುಧವಾರ ‘ಯಸ್‘ ಚಂಡಮಾರುತ ಅಪ್ಪಳಿಸಲಿದೆ ಎಂದು ವರದಿಯಾಗಿರುವ ಬೆನ್ನಲ್ಲೇ ರಾಹುಲ್ ಅವರು ಈ ಸಲಹೆ ಮಾಡಿದ್ದಾರೆ.
‘ಒಡಿಶಾ ಮತ್ತು ಪಶ್ವಿಮ ಬಂಗಾಳದ ಕಡೆಗೆ ಯಸ್ ಚಂಡಮಾರುತ ಧಾವಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಕೂಡಲೇ ಕರಾವಳಿಗೆ ತೆರಳಿ ಸುರಕ್ಷತಾ ಕಾರ್ಯಗಳಲ್ಲಿ ತೊಡಗಬೇಕು ಎಂದು ಮನವಿ ಮಾಡುತ್ತೇನೆ‘ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಗಂಟೆಗೆ 155 ಕಿ.ಮೀ. ಇಂದ 165 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸಲಿದೆ. ಇದು ಕೆಲವೊಮ್ಮೆ ಗಂಟೆಗೆ 185 ಕಿ.ಮೀ. ವೇಗಕ್ಕೆ ಬದಲಾಗಬಹುದು. ಇದೇ ವೇಗದಲ್ಲಿ ಒಡಿಶಾದ ಬಾಲಸೋರ್ನಲ್ಲಿ ಇದು ಭೂಮಿಗೆ ಅಪ್ಪಳಿಸುವ ನಿರೀಕ್ಷೆ ಇದೆ. ಆಗ ಸಮುದ್ರದ ಉಬ್ಬರ 2ರಿಂದ 4.5 ಅಡಿಗಳಷ್ಟು ಇರುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳು ಮತ್ತು ಇತರ ದುರ್ಬಲ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.