ಕಿರಣ್ ರಿಜಿಜು
– ಪಿಟಿಐ ಚಿತ್ರ
ನವದೆಹಲಿ: ಮುಂದಿನ ದಲೈ ಲಾಮಾ ಯಾರೆಂಬ ನಿರ್ಧಾರವನ್ನು ಸ್ಥಾಪಿತ ಸಂಸ್ಥೆ ಮತ್ತು ಟಿಬೆಟಿಯನ್ ಬೌದ್ಧ ನಾಯಕರು ತೆಗೆದುಕೊಳ್ಳುತ್ತಾರೆಯೆ ಹೊರತು, ಬೇರೆ ಯಾರಿಗೂ ಅದರ ಹಕ್ಕಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ಪ್ರತಿಪಾದಿಸಿದರು.
ಚೀನಾಗೆ ತಿರುಗೇಟು ನೀಡಿರುವವ ಈ ಹೇಳಿಕೆಯು, ದಲೈ ಲಾಮಾರ ಉತ್ತರಾಧಿಕಾರಿ ಬಗ್ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಮೊದಲ ಪ್ರತಿಕ್ರಿಯೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು, ‘ದಲೈ ಲಾಮಾ ಬೌದ್ಧರಿಗೆ ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಸಂಸ್ಥೆ. ದಲೈ ಲಾಮಾ ಅವರನ್ನು ಅನುಸರಿಸುವವರೆಲ್ಲರೂ, ಅವರ ಅವತಾರವನ್ನು ಸ್ಥಾಪಿತ ಆಚಾರದಂತೆ ಮತ್ತು ಅವರ ಇಚ್ಛೆಯ ಪ್ರಕಾರ ನಿರ್ಧರಿಸಬೇಕು ಎಂದು ಭಾವಿಸುತ್ತಾರೆ. ಅವರನ್ನು ಮತ್ತು ಜಾರಿಯಲ್ಲಿರುವ ಆಚಾರಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಅದನ್ನು ನಿರ್ಧರಿಸುವ ಹಕ್ಕಿಲ್ಲ’ ಎಂದು ಹೇಳಿದರು.
ತಮ್ಮ ಉತ್ತರಾಧಿಕಾರಿ ಬಗ್ಗೆ ಬುಧವಾರ ಹೇಳಿಕೆ ನೀಡಿದ್ದ ದಲೈ ಲಾಮಾ, ಗಾಡೆನ್ ಫೋಡ್ರಾಂಗ್ ಟ್ರಸ್ಟ್ ಮಾತ್ರ ತಮ್ಮ ಭವಿಷ್ಯದ ಅವತಾರವನ್ನು ಗುರುತಿಸುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಹೇಳಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ಮುಂದಿನ ದಲೈ ಲಾಮಾ ಆಯ್ಕೆಗೆ ತನ್ನ ಒಪ್ಪಿಗೆ ಬೇಕು ಮತ್ತು ಅದು ತನ್ನ ದೇಶದೊಳಗೆ ನಡೆಯಬೇಕು ಎಂದು ಪ್ರತಿಪಾದಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.