ಮುಂಬೈ: ಮಹಾರಾಷ್ಟ್ರ ಸರ್ಕಾರ ಹಾಗೂ ಬೃಹನ್ ಮುಂಬೈ ಮಹಾನಗರ ಪಾಲಿಕೆಗಳು ಕೋವಿಡ್ ವಿರುದ್ಧ ಸೆಣಸುತ್ತಿದ್ದು, ಸೋಂಕಿನಿಂದ ಮೃತಪಟ್ಟವರ ಶವಗಳು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ.
ಎಲ್ಟಿಎಂಜಿ ಆಸ್ಪತ್ರೆ ಹಾಗೂ ಕೆಇಂಎ ಆಸ್ಪತ್ರೆಯ ಕೋವಿಡ್ ವಾರ್ಡ್, ಕಾರಿಡಾರ್ನಲ್ಲಿ ಶವಗಳನ್ನು ಇರಿಸಿದ್ದು, ಶವಾಗಾರಗಳಲ್ಲಿ ಮೃತದೇಹಗಳ ದಟ್ಟಣೆ, ಮೃತದೇಹಗಳ ಕಣ್ಮರೆ, ಅನುಮತಿ ಪಡೆಯದೇ ಅಂತ್ಯಸಂಸ್ಕಾರ, ಮೃತದೇಹ ಸ್ವೀಕರಿಸಲು ಒಪ್ಪದ ಸಂಬಂಧಿಕರು, ಸ್ಮಶಾನಗಳಲ್ಲಿ ದೊಡ್ಡ ಸರತಿ ಸಾಲು – ಹೀಗೆ ಕಳೆದ ಮೂರು ತಿಂಗಳಲ್ಲಿ ಮುಂಬೈನಲ್ಲಿ ಕಂಡುಬರುತ್ತಿರುವ ನಿತ್ಯದ ಚಿತ್ರಣಗಳಿವು.
‘ಮೃತದೇಹಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದಲ್ಲಿ ಕೋವಿಡ್ ವಿರುದ್ಧದ ಹೋರಾಟ ಇನ್ನಷ್ಟು ಜಟಿಲವಾಗಲಿದೆ’ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಇಎಂ ಆಸ್ಪತ್ರೆಯಲ್ಲಿ 12 ಶವಗಳು ಅನಾಥವಾಗಿವೆ ಎಂಬ ವರದಿ ಬಗ್ಗೆ ಪ್ರತಿಕ್ರಿಯಿಸಿದ ಮುಂಬೈ ಮೇಯರ್ ಕಿಶೋರಿ ಫಡ್ನೇಕರ್, ‘7 ಮೃತದೇಹಗಳನ್ನು ಪಡೆಯಲು ಯಾರೂ ಮುಂದೆ ಬಂದಿಲ್ಲ. ಪೊಲೀಸರ ಜತೆ ಚರ್ಚೆ ನಡೆಸಿ, ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದಿದ್ದಾರೆ.
ನಗರದ ಬಹುತೇಕ ಸ್ಮಶಾನಗಳಲ್ಲಿ ಸಂಸ್ಕಾರ ನಡೆಸಲು 8ರಿಂದ 22 ಗಂಟೆ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಕಿರೀಟ್ ಸೋಮಯ್ಯ ಹೇಳಿದ್ದಾರೆ.
ಕಠಿಣ ಕ್ರಮದ ಎಚ್ಚರಿಕೆ:ಕೋವಿಡ್ ಪೀಡಿತ 80 ವರ್ಷದ ವೃದ್ಧೆಯೊಬ್ಬರು ಜಲಗಾಂವ್ ಆಸ್ಪತ್ರೆಯ ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಗೃಹಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.