ಲಖನೌ: ವ್ಯಕ್ತಿಯೊಬ್ಬರು ಕೋವಿಡ್-19ರಿಂದ ಮೃತಪಟ್ಟಿರಬಹುದೆಂದು ಭಾವಿಸಿ, ಮುಟ್ಟಲು ಹೆದರಿದ ಪಾಲಿಕೆ ನೌಕರರು ಮತ್ತು ಪೊಲೀಸರು ಪರೀಕ್ಷೆಗಾಗಿ ಶವವನ್ನು ಕಸದಗಾಡಿಯಲ್ಲಿ ಸಾಗಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ನಡೆದಿದೆ.
ಉತ್ರೂಲ ಪಾಲಿಕೆಯ ಬಳಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಮಾಹಿತಿ ಸಿಕ್ಕ ಕೂಡಲೇ ಬಂದ ಪೊಲೀಸ್ ಅಧಿಕಾರಿಗಳು ದೂರದಿಂದಲೇ ನಿಂತು ಕೋವಿಡ್ನಿಂದ ಮೃತಪಟ್ಟಿರಬಹುದು ಶಂಕೆ ವ್ಯಕ್ತಪಡಿಸಿದ್ದರು. ಶವದ ಸಮೀಪ ಹೋಗಲು ಪಾಲಿಕೆಯ ಸ್ವಚ್ಛತಾ ವಿಭಾಗದ ನೌಕರರು ಹೆದರಿದ್ದರು. ನಂತರ ಖಾಸಗಿ ನೌಕರರ ಸಹಾಯದಿಂದ ಶವಪರೀಕ್ಷೆಗೆ ಸಾಗಿಸಲಾಯಿತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮೂವರು ಪೊಲೀಸರು, ನಾಲ್ಕು ಪಾಲಿಕೆ ನೌಕರರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಅಮಾನತು ಮಾಡಲಾಗಿದ್ದು, ತನಿಖೆ ನಡೆಸಲು ಸೂಚಿಸಲಾಗಿದೆ.
ವಿಡಿಯೊದಲ್ಲಿ ಆಂಬುಲೆನ್ಸ್ ಸಿಬ್ಬಂದಿ ಶವವವನ್ನು ಸಾಗಿಸಲು ನಿರಾಕರಿಸಿರುವ ಬಗ್ಗೆಯೂ ದೃಶ್ಯಾವಳಿಗಳಿವೆ.ಮೃತಪಟ್ಟ ವ್ಯಕ್ತಿಯನ್ನು ಬಲರಾಂಪುರ ಜಿಲ್ಲೆಯ ಮೊಹದ್ ಅನ್ವರ್ ಎಂದು ಗುರುತಿಸಲಾಗಿದ್ದು, ಕೆಲಸದ ನಿಮಿತ್ತ ಪಾಲಿಕೆಗೆ ಕಚೇರಿಗೆ ಬಂದಿದ್ದರು. ಬಾಗಿಲ ಬಳಿ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟರು ಎಂದು ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.