ADVERTISEMENT

ಮಾನಹಾನಿ ಪ್ರಕರಣ: ರಾಜಕೀಯ ದುರುದ್ದೇಶದಿಂದ ದಾಖಲಿಸಲಾಗಿದೆ; ಕೋರ್ಟ್‌ಗೆ ರಾಹುಲ್

ಪಿಟಿಐ
Published 20 ಫೆಬ್ರುವರಿ 2026, 9:54 IST
Last Updated 20 ಫೆಬ್ರುವರಿ 2026, 9:54 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ಸುಲ್ತಾನಪುರ(ಉತ್ತರ ಪ್ರದೇಶ): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕುರಿತಾದ ಹೇಳಿಕ ಸಂಬಂಧಿತ 2018ರ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಲ್ತಾನಪುರದ ಸಂಸದರು–ಶಾಸಕರ ನ್ಯಾಯಾಲಯಕ್ಕೆ ಹಾಜರಾದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮ ಹೇಳಿಕೆ ದಾಖಲಿಸಿದರು.

ADVERTISEMENT

ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಮತ್ತು ಪಕ್ಷದ ಹೆಸರು ಹಾಳುಮಾಡುವ ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಧೀಶ ಶುಭಂ ವರ್ಮಾ ಎದುರು ಹೇಳಿಕೆ ದಾಖಲಿಸಿದರು ಎಂದು ರಾಹುಲ್ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಮಾರ್ಚ್ 9ಕ್ಕೆ ನಿಗದಿ ಮಾಡಿದ ನ್ಯಾಯಾಲಯ, ತಮ್ಮ ಸಮರ್ಥನೆಗೆ ಸಾಕ್ಷ್ಯ ಒದಗಿಸುವಂತೆ ರಾಹುಲ್‌ಗೆ ಸೂಚಿಸಿದೆ ಎಂದು ವಿವರಿಸಿದ್ದಾರೆ.

ವಿಚಾರಣೆ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಂಡ ಅವರು, ರಾಹುಲ್ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ತಳ್ಳಿಹಾಕಿದರು ಎಂದು ತಿಳಿಸಿದ್ದಾರೆ.

ನನ್ನ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ. ನಾನು ಯಾರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿಲ್ಲ ಅಥವಾ ಯಾರನ್ನೂ ಮಾನಹಾನಿ ಮಾಡುವ ಉದ್ದೇಶದಿಂದ ಅಂತಹ ಭಾಷೆಯನ್ನು ಬಳಸಿಲ್ಲ. ನನ್ನ ಹೇಳಿಕೆಯನ್ನು ತಿರುಚಿ ಸುಳ್ಳು ದೂರು ದಾಖಲಿಸಲಾಗಿದೆ ಎಂದು ರಾಹುಲ್ ಹೇಳಿರುವುದಾಗಿ ಶುಕ್ಲಾ ಉಲ್ಲೇಖಿಸಿದ್ದಾರೆ.

ನನ್ನ ಮತ್ತು ನನ್ನ ಪಕ್ಷದ ಹೆಸರನ್ನು ಹಾಳು ಮಾಡುವ ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡಲಾಗಿದೆ. ನಾನು ಯಾರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿಲ್ಲ, ಅಥವಾ ಯಾರನ್ನೂ ಮಾನಹಾನಿ ಮಾಡುವ ಉದ್ದೇಶದಿಂದ ಅಂತಹ ಭಾಷೆಯನ್ನು ಬಳಸಿಲ್ಲ ಎಂದು ರಾಹುಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ರಾಹುಲ್ ತಮ್ಮ ಹೇಳಿಕೆಯನ್ನು ದಾಖಲಿಸಿದ ನಂತರ ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ, ಪಕ್ಷದ ಬೆಂಬಲಿಗರು ಅವರನ್ನು ಸ್ವಾಗತಿಸುವ ಘೋಷಣೆಗಳನ್ನು ಕೂಗಿದರು. ಮುಗುಳ್ನಗುತ್ತಾ ರಾಹುಲ್ ಗಾಂಧಿ ಜನಸಮೂಹದತ್ತ ಕೈ ಬೀಸಿದರು.

ಬೆಳಿಗ್ಗೆ 10.40ರ ಸುಮಾರಿಗೆ ಸುಲ್ತಾನಪುರ ನ್ಯಾಯಾಲಯಕ್ಕೆ ಬಂದ ರಾಹುಲ್, ಹೇಳಿಕೆ ದಾಖಲಿಸಿ 11.15ರ ಸುಮಾರಿಗೆ ಹೊರನಡೆದರು. ಸುಲ್ತಾನಪುರದ ಕೆಲ ಕಾಂಗ್ರೆಸ್ ನಾಯಕರು ಸತ್ಯಮೇವ ಜಯತೇ ಎಂಬ ಪೋಸ್ಟರ್ ಸಹ ಹಾಕಿದ್ದರು.

2018ರಲ್ಲಿ ಸ್ಥಳೀಯ ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.