ADVERTISEMENT

ಪತಿ ವಿರುದ್ಧ ಪತ್ನಿಯ ನಿರಾಧಾರ ಆರೋಪ, ನಿಂದನೆಯೂ ಕ್ರೌರ್ಯ: ಬಾಂಬೆ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 12:19 IST
Last Updated 25 ಅಕ್ಟೋಬರ್ 2022, 12:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ : ‘ಪತ್ನಿ ಯಾವುದೇ ಪುರಾವೆಗಳಿಲ್ಲದೇ ತನ್ನ ಪತಿಯನ್ನು‘ಹೆಣ್ಣುಬಾಕ ಮತ್ತು ಕುಡುಕ’ನೆಂದು ಆರೋಪಿಸಿ ತೇಜೋವಧೆ ಮಾಡುವುದು ಕ್ರೌರ್ಯ’ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಪುಣೆ ಮೂಲದ ದಂಪತಿಗೆ ವಿವಾಹ ವಿಚ್ಛೇದನ ನೀಡಿ ಆದೇಶ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ನ್ಯಾಯಮೂರ್ತಿಗಳಾದ ನಿತಿನ್‌ ಜಾಮದಾರ್‌ ಮತ್ತು ಶರ್ಮಿಳಾ ದೇಶ್‌ಮುಖ್‌ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿದೆ.

ನಿವೃತ್ತ ಸೇನಾಧಿಕಾರಿಯೊಬ್ಬರು ಪತ್ನಿಯ ನಿರಾಧಾರ ಆರೋಪ ಮತ್ತು ತೇಜೋವಧೆಯಿಂದ ಬೇಸತ್ತುವಿವಾಹ ವಿಚ್ಛೇದನ ಕೋರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದಪುಣೆಯ ಕೌಟುಂಬಿಕ ನ್ಯಾಯಾಲಯವು 2005ರಲ್ಲಿ ವಿಚ್ಛೇದನಕ್ಕೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸೇನಾಧಿಕಾರಿಯ ಪತ್ನಿ (50 ವರ್ಷ) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಭಾಗೀಯ ಪೀಠವು ಅ.12ರಂದು ವಜಾಗೊಳಿಸಿ, ತೀರ್ಪು ನೀಡಿದೆ.

ADVERTISEMENT

ಮೇಲ್ಮನವಿ ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ಪ್ರತಿವಾದಿ ಮೃತಪಟ್ಟಿದ್ದರು. ಹಾಗಾಗಿ ಅವರ ವಕೀಲರನ್ನೇ ಉತ್ತರಾಧಿಕಾರಿಪ್ರತಿವಾದಿಯಾಗಿ ಪ್ರತಿನಿಧಿಸಲು ಕೋರ್ಟ್‌ ನಿರ್ದೇಶಿಸಿತ್ತು.

ಮಹಿಳೆ ತನ್ನ ಪತಿ ವಿರುದ್ಧದ ಆರೋಪಗಳಿಗೆ ಪುರಾವೆ ಸಲ್ಲಿಸಲು ವಿಫಲವಾದ ಕಾರಣಕ್ಕೆ ನ್ಯಾಯಪೀಠವು,ತನ್ನ ಗಂಡನ ವಿರುದ್ಧ ಹೆಂಡತಿ ಅನಗತ್ಯ ಮತ್ತು ಸುಳ್ಳು ಆರೋಪಗಳನ್ನು ಮಾಡುವುದು, ಹೆಂಡತಿಯ ಇಂತಹ ನಡವಳಿಕೆಯು ಸಮಾಜದಲ್ಲಿ ಆತನ ಖ್ಯಾತಿಯ ಹಾನಿಗೆ ಕಾರಣವಾಗುತ್ತದೆ. ಇದು ಕ್ರೌರ್ಯಕ್ಕೆ ಸಮಾನ ಎಂದು ಅಭಿ‍ಪ್ರಾಯಪಟ್ಟಿದೆ.

‘ಅರ್ಜಿದಾರ ಮಹಿಳೆ ಆಧಾರ ರಹಿತವಾಗಿ ಪ್ರತಿವಾದಿ ಮೇಲೆ ಮದ್ಯವ್ಯಸನಿ ಮತ್ತು ಹೆಣ್ಣುಬಾಕ ಎನ್ನುವ ಕಳಂಕ ಹಚ್ಚಿರುವುದರಿಂದ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1) (ಐ–ಎ) ಪ್ರಕಾರ ಇದನ್ನು ಕ್ರೌರ್ಯವೆಂದು ಪರಿಗಣಿಸಿ, ವಿಚ್ಛೇದನಕ್ಕೆ ಇದು ಸೂಕ್ತ ಪ್ರಕರಣವಾಗಿ ಪರಿಗಣಿಸಲಾಗಿದೆ’ ಎಂದು ವಿಭಾಗೀಯ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.