ನವದೆಹಲಿ: ‘ಪಕ್ಷಾಂತರಿಗಳು ಮುಂದಿನ ಐದು ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಹುದ್ದೆ ಅನುಭವಿಸುವುದರ ಮೇಲೆ ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದರ ಮೇಲೆ ನಿಷೇಧ ಹೇರಬೇಕು’ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ.
ರಾಜಸ್ಥಾನದ ರಾಜಕೀಯ ಬೆಳವಣಿಗೆಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಭಾನುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಜನರಿಂದ ಆಯ್ಕೆಯಾದ ಸರ್ಕಾರವನ್ನು ‘ಭ್ರಷ್ಟ ಮಾರ್ಗ’ದಿಂದ ಕೆಡವುವಂಥ ವೈರಸ್ ದೆಹಲಿಯಲ್ಲಿದೆ. ಇದು ವುಹಾನ್ ವೈರಸ್ನಷ್ಟೇ ಅಪಾಯಕಾರಿ. ಇದಕ್ಕಿರುವ ಪ್ರತಿಕಾಯಗಳೆಂದರೆ ಸಂವಿಧಾನದ ಹತ್ತನೇ ವಿಧಿಗೆ ತಿದ್ದುಪಡಿ ಮಾಡುವುದಾಗಿದೆ. ಪಕ್ಷಾಂತರ ನಿಷೇಧ ಕಾನೂನಿಗೆ ತಿದ್ದುಪಡಿ ತಂದು, ಪಕ್ಷಾಂತರಿಗಳು ಐದು ವರ್ಷಗಳ ಕಾಲ ಯಾವುದೇ ಹುದ್ದೆ ಹೊಂದುವುದು ಹಾಗೂ ಮುಂದಿನ ಚುನಾವಣೆ ಎದುರಿಸುವುದನ್ನು ತಡೆಯಬೇಕು’ ಎಂದು ಅವರು ಪರೋಕ್ಷವಾಗಿ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.
ತಾನು ಬಿಜೆಪಿ ಸೇರುವುದಿಲ್ಲ ಎಂದು ಸಚಿನ್ ಪೈಲಟ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ, ‘ಅವರ ಘರ್ ವಾಪಸಿ ವಿಚಾರ ಏನಾಯಿತು? ಹರಿಯಾಣದಲ್ಲಿ ಕೇಸರಿ ಪಕ್ಷದ ಕಣ್ಗಾವಲಿನಲ್ಲಿ ಸಚಿನ್ ಬೆಂಬಲಿಗ ಶಾಸಕರು ರಜಾಕಾಲವನ್ನು ಅನುಭವಿಸುತ್ತಿದ್ದಾರೆಯೇ’ ಎಂದು ಸಿಬಲ್ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.