ADVERTISEMENT

ನಮ್ಮ ನೆರೆರಾಷ್ಟ್ರದಂತವರು ಯಾರಿಗೂ ಸಿಗದಿರಲಿ ಎಂದು ಪ್ರಾರ್ಥಿಸುವೆ:ರಾಜನಾಥ್ ಸಿಂಗ್

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 11:11 IST
Last Updated 8 ಆಗಸ್ಟ್ 2019, 11:11 IST
   

ನವದೆಹಲಿ: ಯಾವುದೇ ರಾಷ್ಟ್ರಕ್ಕೂ ಈ ರೀತಿಯನೆರೆರಾಷ್ಟ್ರ ಸಿಗದೇ ಇರಲಿ ಎಂದು ಪಾಕಿಸ್ತಾನವನ್ನು ಉಲ್ಲೇಖಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾರತದ ಜೊತೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಹಾಕಲು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ರದ್ದುಪಡಿಸಲು ಪಾಕಿಸ್ತಾನ ಬುಧವಾರ ತೀರ್ಮಾನಿಸಿದರ ಬೆನ್ನಲ್ಲೇ ರಾಜನಾಥ ಸಿಂಗ್ ಈ ರೀತಿ ಹೇಳಿದ್ದಾರೆ.

ನಾವು ನಮ್ಮ ನೆರರಾಷ್ಟ್ರಗಳ ಬಗ್ಗೆ ಕಾಳಜಿ ವಹಿಸುತ್ತೇವೆ.ನೀವು ನಿಮ್ಮ ಸ್ನೇಹಿತರನ್ನು ಬದಲಿಸಬಹುದು ಆದರೆ ನಿಮ್ಮ ನೆರೆಯವರನ್ನು ಬದಲಿಸಲು ಸಾಧ್ಯವಿಲ್ಲ. ನಮ್ಮ ನೆರೆರಾಷ್ಟ್ರದಂತವರು ಬೇರೆ ಯಾರಿಗೂ ಸಿಗದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ ರಾಜನಾಥ ಸಿಂಗ್.

ADVERTISEMENT

ಗುರುವಾರ ದೆಹಲಿಯಲ್ಲಿ ಸೇನಾ ಪಡೆಯ ಮುಖ್ಯಸ್ಥರನ್ನುದ್ದೇಶಿಸಿ ಮಾತನಾಡಿದ ಕಾರ್ಯಕ್ರಮದಲ್ಲಿ ರಾಜನಾಥ ಸಿಂಗ್ ಆ ಮಾತು ಹೇಳಿದ್ದಾರೆ.

ಯಾವುದೇ ಒಂದು ರಾಷ್ಟ್ರಕ್ಕೆ ತನ್ನ ನೆರೆ ರಾಷ್ಟ್ರವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿರುವುದನ್ನು ಸಿಂಗ್ ಇಲ್ಲಿ ನೆನಪಿಸಿಕೊಂಡಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರವು ರದ್ದು ಮಾಡಿರುವುದಕ್ಕೆ ಪ್ರತಿಯಾಗಿ ಪಾಕ್‌ ಈ ಕ್ರಮ ಕೈಗೊಂಡಿದೆ. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಬುಧವಾರ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಸದಸ್ಯರ ಜೊತೆ ಸಭೆ ನಡೆಸಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಈ ತೀರ್ಮಾನ ಹೊರಬಿದ್ದಿದೆ.

ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್‌ ಅಜಯ್‌ ಬಿಸರಿಯಾ ಅವರನ್ನು ವಾಪಸ್‌ ಕಳುಹಿಸಿ, ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಯನ್ನು ವಾಪಸ್‌ ಕರೆಯಿಸಿಕೊಳ್ಳುವುದಾಗಿಯೂ ಪಾಕಿಸ್ತಾನ ಹೇಳಿದೆ.

ಇದನ್ನೂ ಓದಿ:ಹೈಕಮಿಷನರ್‌ ವಾಪಸ್‌, ರಾಜತಾಂತ್ರಿಕ ಸಂಬಂಧ ಅಂತ್ಯ: ಪಾಕಿಸ್ತಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.