ದೆಹಲಿಯ ಶಾಲಿಮಾಬಾಗ್ ಕ್ಷೇತ್ರದಲ್ಲಿ ಆಂಜನೇಯ ದೇವಾಲಯದಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಶನಿವಾರ ಪೂಜೆ ಸಲ್ಲಿಸಿದರು
ಪಿಟಿಐ ಚಿತ್ರ
ನವದೆಹಲಿ: ‘ನನ್ನ ಆಡಳಿತಾವಧಿಯಲ್ಲಿ ನಗರದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು. ನಗರದ ಕೊಳಚೆ ಪ್ರದೇಶ ಮತ್ತು ನಿರ್ಮಾಣ ಹಂತದ ಕಟ್ಟಡಗಳಿರುವ ಸ್ಥಳಗಳನ್ನೂ ಒಳಗೊಂಡು ಒಟ್ಟು 100 ಅಟಲ್ ಕ್ಯಾಂಟೀನ್ ತೆರೆಯಲು ಸರ್ಕಾರ ಯೋಜನೆ ರೂಪಿಸಿದೆ’ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶನಿವಾರ ತಿಳಿಸಿದ್ದಾರೆ.
ಹನುಮಾನ್ ಜಯಂತಿ ಅಂಗವಾಗಿ ತಾವು ಪ್ರತಿನಿಧಿಸುವ ಶಾಲಿಮಾಬಾಗ್ ಕ್ಷೇತ್ರದಲ್ಲಿ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ, ಗಂಟೆಗೆ 1,200 ಚಪಾತಿ ಸಿದ್ಧಪಡಿಸುವ ಸ್ವಯಂಚಾಲಿತ ಯಂತ್ರಕ್ಕೆ ಚಾಲನೆ ನೀಡಿದರು.
‘ಅಟಲ್ ಕ್ಯಾಂಟೀನ್ಗಳಲ್ಲಿ ಸ್ವಯಂ ಚಾಲಿತ ಆಹಾರ ತಯಾರಿಕಾ ಯಂತ್ರಗಳನ್ನು ಸ್ಥಾಪಿಸಿ ತ್ವರಿತವಾಗಿ ಜನರಿಗೆ ಊಟ ನೀಡುವ ಯೋಜನೆ ಇದೆ. ಜತೆಗೆ ಸಾಮಾನ್ಯರ ಕೈಗೆಟಕುವ ದರದಲ್ಲಿ ಇಲ್ಲಿ ಆಹಾರ ನೀಡುವ ಉದ್ದೇಶವಿದ್ದು, ಬಜೆಟ್ನಲ್ಲೂ ಇದನ್ನು ಪ್ರಸ್ತಾಪಿಸಲಾಗಿದೆ’ ಎಂದಿದ್ದಾರೆ.
‘ಸಮಾಜ ಉದ್ಧಾರವಾದರೆ, ದೇಶವು ಪ್ರತಿದಿನ ಒಂದಷ್ಟು ಹೆಜ್ಜೆ ಮುಂದೆ ಹೋಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ಪ್ರಯಾಸ್ ಎಂಬ ಘೋಷವಾಕ್ಯದಂತೆಯೇ ಬಡವರಿಗೆ ಹಾಗೂ ಅಗತ್ಯ ಇರುವವರಿಗೆ ಊಟ ನೀಡುವ ಯೋಜನೆ ಇದಾಗಿದೆ’ ಎಂದು ರೇಖಾ ನೆನಪಿಸಿಕೊಂಡಿದ್ದಾರೆ.
‘ವಿಕಸಿತ್ ದೆಹಲಿಯನ್ನು ಸಾಧಿಸಲು ಸಮಾಜದ ಒಂದಷ್ಟು ವಿಭಾಗಗಳ ಜನರ ಅಭಿವೃದ್ಧಿಯಾಗಬೇಕಿದೆ. ಸರ್ಕಾರವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ದೆಹಲಿಯನ್ನು ಇನ್ನಷ್ಟು ಉತ್ತಮಗೊಳಿಸಲು ಆರೋಗ್ಯ, ಶಿಕ್ಷಣ ಮತ್ತು ಸಮಗ್ರ ಅಭಿವೃದ್ಧಿಗೆ ಗಮನ ನೀಡಬೇಕಿದೆ. ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.