
ದೆಹಲಿ ಸ್ಫೋಟ
(ಪಿಟಿಐ ಚಿತ್ರ)
ನವದೆಹಲಿ: ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದ ವಿಚಾರವು ಬುಧವಾರ ನಡೆದ ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಆದರೆ, ಈ ಕುರಿತು ಚರ್ಚೆ ನಡೆಸಲು ಅವಕಾಶ ನೀಡಲು ಸಮಿತಿ ಅಧ್ಯಕ್ಷರು ನಿರಾಕರಿಸಿದರು ಎಂದು ಮೂಲಗಳು ಹೇಳಿವೆ.
‘ಸಮಿತಿ ಅಧ್ಯಕ್ಷರಾದ ರಾಧಾಮೋಹನ್ ಅಗರ್ವಾಲ್ ಅವರು ಈ ವಿಚಾರ ಕುರಿತು ಚರ್ಚೆ ನಡೆಸಬೇಕು ಎಂಬ ಬೇಡಿಕೆಯನ್ನು ತಿರಸ್ಕರಿಸಿದರು. ಸ್ಫೋಟ ಕುರಿತು ಯಾವುದೇ ಸ್ವಯಂ ಪ್ರೇರಿತ ಹೇಳಿಕೆಗಳನ್ನು ನೀಡುವುದಕ್ಕೂ ಅನುಮತಿ ನೀಡಲಿಲ್ಲ’ ಎಂದು ಮೂಲಗಳು ಹೇಳಿವೆ.
‘ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಕುರಿತು ಟಿಎಂಸಿ ಸಂಸದರೊಬ್ಬರು ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ವಿಚಾರದಲ್ಲಿ ಗುಪ್ತಚರ ಸಂಸ್ಥೆಯಿಂದಾದ ವೈಫಲ್ಯದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು’ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.
‘ವಿಪತ್ತು ನಿರ್ವಹಣೆ’ ಕುರಿತು ಚರ್ಚಿಸುವುದಕ್ಕಾಗಿ ಸಂಸದೀಯ ಸ್ಥಾಯಿ ಸಮಿತಿ ಸಭೆ ನಡೆಯಿತು. ಈ ವಿಚಾರವಾಗಿ ಗೃಹ ಸಚಿವಾಲಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್ಡಿಎಂಎ), ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ(ಎನ್ಡಿಆರ್ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆ(ಎನ್ಐಡಿಎಂ) ಹಾಗೂ ಅಗ್ನಿಶಾಮಕ ಸೇವೆಗಳು, ಗೃಹರಕ್ಷಕ ದಳ ಹಾಗೂ ನಾಗರಿಕ ರಕ್ಷಣೆ ಮಹಾನಿರ್ದೇಶನಾಲಯದ ಅಭಿಪ್ರಾಯಗಳನ್ನು ಸಮಿತಿಯು ಆಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.