
ನವದೆಹಲಿ/ಶ್ರೀನಗರ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಸಹ ಸೂತ್ರಧಾರಿ ಡಾ.ಮುಜಫರ್ ರಾಥಾರ್ ವಿರುದ್ಧ ಇಂಟರ್ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಿ, ಬಂಧಿಸಲು ತಯಾರಿ ನಡೆಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ವೈಟ್ಕಾಲರ್ ಭಯೋತ್ಪಾದನೆ ಜಾಲದ ಭಾಗವಾಗಿರುವ ಮುಜಫರ್ ರಾಥಾರ್ ನವೆಂಬರ್ 10ರಂದು ನಡೆದಿದ್ದ ಸ್ಫೋಟಕ್ಕೆ ಸಹಕಾರ ಮತ್ತು ಆಫ್ಗಾನ್ನಿಂದ ಹಣಕಾಸು ನೆರವು ಒದಗಿಸಿದ್ದ ಎನ್ನುವುದು ತನಿಖೆ ವೇಳೆ ಪತ್ತೆಯಾಗಿದೆ.
ವೃತ್ತಿಯಲ್ಲಿ ಮಕ್ಕಳ ವೈದ್ಯನಾಗಿರುವ ಮುಜಫರ್, ದಕ್ಷಿಣ ಕಾಶ್ಮೀರದ ನಿವಾಸಿ. ಈತನನ್ನು ಈಗಾಗಲೇ ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ವಿಶೇಷ ನ್ಯಾಯಾಲಯ ಘೋಷಿತ ಅಪರಾಧಿ ಎಂದು ನಿರ್ಧರಿಸಿದೆ.
ಸ್ಫೋಟಕ್ಕೂ ಮುನ್ನ ಆಗಸ್ಟ್ನಲ್ಲಿ ಭಾರತವನ್ನು ತೊರೆದಿದ್ದ ರಾಥಾರ್ ವಿದೇಶದಿಂದಲೇ ದಾಳಿಯ ರೂಪುರೇಷೆ ಸಿದ್ಧಪಡಿಸಿದ್ದ. ಸ್ಫೋಟಗೊಂಡ ಕಾರು ಚಾಲನೆ ಮಾಡುತ್ತಿದ್ದ ಡಾ. ಉಮರ್ ಉನ್ ನಬಿಗೆ ಈತ ಸಲಕರಣೆ, ಹಣಕಾಸು, ಸಂವಹನ ಮತ್ತು ರೂಪುರೇಷೆಯ ನೆರವು ನೀಡಿದ್ದ. ರಾಥಾರ್ ಮೊದಲು ದುಬೈಗೆ ತೆರಳಿ ಅಲ್ಲಿಂದ ಅಫ್ಗಾನಿಸ್ತಾನಕ್ಕೆ ಸ್ಥಳಾಂತರಗೊಂಡು ಅಡಗಿರುವ ಶಂಕೆ ಇದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಗಾನಿಸ್ತಾನ ಮೂಲದವರ ಜೊತೆ ರಾಥಾರ್ ನಿರಂತರ ಸಂಪರ್ಕದಲ್ಲಿದ್ದು, ಬಾಂಬ್ ತಯಾರಿ ಮತ್ತು ಕಾರ್ಯಾಚರಣೆಯ ತಂತ್ರಗಾರಿಕೆಗೆ ಸಂಬಂಧಿಸಿ ಮಾಹಿತಿ ನೀಡುತ್ತಿದ್ದ. ಇತರೆ ಆರೋಪಿಗಳ ವಿಚಾರಣೆ ವೇಳೆ ರಾಥಾರ್ ಸುಮಾರು ₹ 6 ಲಕ್ಷ ನೀಡಿರುವ ಮಾಹಿತಿ ಸಿಕ್ಕಿತ್ತು ಎಂದು ಎನ್ಐಎ ಹೇಳಿದೆ.
2021ರಲ್ಲಿ ಡಾ.ಮುಜಮ್ಮಿಲ್ ಅಹ್ಮದ್ ಘನಿ, ಉಮರ್ (ದೆಹಲಿ ಸ್ಫೋಟ ಆರೋಪಿಗಳು) ಜೊತೆ ರಾಥಾರ್ ಟರ್ಕಿಗೆ ಹೋಗಿ ವಿದೇಶಿ ಸೂತ್ರಧಾರರ ಸಂಪರ್ಕ ಸಾಧಿಸಿದ್ದ. ಅಲ್ಲಿಂದ ಬಂದು ಮೂವರೂ ಫರೀದಾಬಾದ್ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದರು. ಅಲ್ಲಿದ್ದುಕೊಂಡೆ 360 ಕೆ.ಜಿ. ಅಮೋನಿಯಂ ನೈಟ್ರೇಟ್, ಪೊಟ್ಯಾಷಿಯಂ ನೈಟ್ರೇಟ್, ಸಲ್ಫರ್ ಅನ್ನು ವಿ.ವಿ.ಕ್ಯಾಂಪಸ್ನಲ್ಲಿ ಶೇಖರಿಸಿದ್ದರು ಎಂದು ಎನ್ಐಎ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.