ADVERTISEMENT

ಸೇವೆಗಳ ಮೇಲಿನ ಕೇಂದ್ರದ ನಿಯಂತ್ರಣ: ಸುಗ್ರೀವಾಜ್ಞೆಯ ಪ್ರತಿ ಸುಡಲಿರುವ ಕೇಜ್ರಿವಾಲ್

ಪಿಟಿಐ
Published 30 ಜೂನ್ 2023, 11:18 IST
Last Updated 30 ಜೂನ್ 2023, 11:18 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಸೇವೆಗಳ ನಿಯಂತ್ರಣವನ್ನು ದೆಹಲಿ ಸರ್ಕಾರಕ್ಕೆ ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯ ಪ್ರತಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಜುಲೈ 3 ರಂದು ಸುಟ್ಟು ಹಾಕಲಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷ ತಿಳಿಸಿದೆ.

ದೆಹಲಿಯ ಆಮ್‌ ಆದ್ಮಿ ಕಚೇರಿಯಲ್ಲಿ ಸುಗ್ರೀವಾಜ್ಞೆಯ ಪ್ರತಿಗಳನ್ನು ಅವರು ಸುಟ್ಟು ಹಾಕಲಿದ್ದಾರೆ.

ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ‍ಪಕ್ಷದ ಮುಖ್ಯ ವಕ್ತಾರ ಸೌರಭ್‌ ಭಾರಧ್ವಾಜ್, ‘ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸುಗ್ರೀವಾಜ್ಞೆಯನ್ನು ಸುಟ್ಟು ಹಾಕುತ್ತೇವೆ. ಜುಲೈ 3 ರಂದು ದೆಹಲಿ ಮುಖ್ಯಮಂತ್ರಿ, ಎಲ್ಲಾ ಸಚಿವ ಸಂಪುಟದ ಸದಸ್ಯರು ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಈ ಕರಾಳ ಸುಗ್ರೀವಾಜ್ಞೆಯನ್ನು ಸುಟ್ಟು ಹಾಕಲಿದ್ದಾರೆ‘ ಎಂದು ಅವರು ಹೇಳಿದರು.

ADVERTISEMENT

ಜುಲೈ 5 ರಂದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ, ಜುಲೈ 6 ರಿಂದ 13ರ ವರೆಗೆ ದೆಹಲಿಯ ಮೂಲೆ ಮೂಲೆಗಳಲ್ಲಿ ಈ ಸುಗ್ರಿವಾಜ್ಞೆ ಪ್ರತಿಯನ್ನು ಸುಟ್ಟುಹಾಕಲಿದ್ದೇವೆ ಎಂದು ಅವರು ಹೇಳಿದರು.

ಈ ಕರಾಳ ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರ್ಕಾರ ದೆಹಲಿ ಮೇಲೆ ಅನಧಿಕೃತವಾಗಿ ನಿಯಂತ್ರಣ ತೆಗೆದುಕೊಳ್ಳಲು ಮುಂದಾಗಿದೆ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.