ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜನರಿಗಾಗಿ ಕೆಲಸ ಮಾಡುವಾಗಲೆಲ್ಲಾ ಬಿಜೆಪಿ ನಾಯಕರು ಅವರನ್ನು 'ಟೀಕಿಸುತ್ತಾರೆ ಮತ್ತು ನಿಂದಿಸುತ್ತಾರೆ' ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ ಆರೋಪಿಸಿದ್ದಾರೆ. ಆದರೆ ಕೇಂದ್ರವು ಅವರ ಮೇಲೆ ವಾಗ್ದಾಳಿ ನಡೆಸಿದ ಹೊರತಾಗಿಯೂ ಮುಖ್ಯಮಂತ್ರಿ ಕೋವಿಡ್-19 ಲಸಿಕೆಗಾಗಿ ಬೇಡಿಕೆ ಮುಂದುವರಿಸುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.
ದೆಹಲಿಗೆ ಹೆಚ್ಚಿನ ಲಸಿಕೆ ನೀಡುವಂತೆ ಒತ್ತಾಯಿಸಲು ಪ್ರಾರಂಭಿಸಿದ್ದರಿಂದಲೇ ಕೇಜ್ರಿವಾಲ್ ಅವರನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟೀಕಿಸಿದ್ದಾರೆ ಮತ್ತು ನಿಂದಿಸಿದ್ದಾರೆ ಎಂದವರು ಆರೋಪಿಸಿದರು.
'ಲಸಿಕೆ ನಿರ್ವಹಣೆಯಲ್ಲಿ ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಡಲು ಬಿಜೆಪಿ ನಾಯಕರು ಕೇಜ್ರಿವಾಲ್ ಅವರನ್ನು ಟೀಕಿಸುತ್ತಿದ್ದಾರೆ ಮತ್ತು ನಿಂದಿಸುತ್ತಿದ್ದಾರೆ. ಆದರೆ ಅವರು ಎಷ್ಟೇ ನಿಂದಿಸಿದರೂ ಕೂಡ, ಕೇಜ್ರಿವಾಲ್ ದೆಹಲಿ ಜನರಿಗಾಗಿ ಲಸಿಕೆ ಬೇಡಿಕೆಯನ್ನು ಮುಂದುವರಿಸುತ್ತಾರೆ' ಎಂದು ಸಿಸೋಡಿಯಾ ತಿಳಿಸಿದ್ದಾರೆ.
ಈ ಮಧ್ಯೆ ಬಿಜೆಪಿಯು ದೆಹಲಿಯ ವೈದ್ಯಕೀಯ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಿದ್ದು, ಜನರ ಪ್ರಾಣ ಉಳಿಸಲು ಕೇಜ್ರಿವಾಲ್ ಹೋರಾಡಿದರು. ಲಸಿಕೆ ಖರೀದಿಸಬೇಕಿರುವ ಸಮಯದಲ್ಲಿ ಬಿಜೆಪಿಯು 'ಮತದಾನ ನಿರ್ವಹಣೆ ಮತ್ತು ಸ್ವಪ್ರತಿಷ್ಠೆಯ ನಿರ್ವಹಣೆ'ಯಲ್ಲಿ ನಿರತವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರವು ಪ್ರತಿ ಕೊರೊನಾ ವೈರಸ್ನ ಮೂರನೇ ಅಲೆಗೂ ಮುಂಚಿತವಾಗಿಯೇ ಎಲ್ಲಾ ದೆಹಲಿ ಜನರಿಗೂ ಲಸಿಕೆ ನೀಡಲು ಬದ್ಧವಾಗಿದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.