ADVERTISEMENT

ವಿದ್ಯುತ್‌ ಪೂರೈಕೆ ಬಿಕ್ಕಟ್ಟು ಸಂಭವ: ಪ್ರಧಾನಿ ಮೋದಿಗೆ ಕೇಜ್ರಿವಾಲ್‌ ಪತ್ರ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 11:52 IST
Last Updated 9 ಅಕ್ಟೋಬರ್ 2021, 11:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿಯು ವಿದ್ಯುತ್‌ ಬಿಕ್ಕಟ್ಟನ್ನು ಎದುರಿಸುವ ಸಂಭವ ಇದೆ. ಇಂತಹ ಪರಿಸ್ಥಿತಿ ನಿವಾರಣೆಗೆ ತಮ್ಮ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಮತ್ತಷ್ಟು ನೆರವಿನ ಅಗತ್ಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶನಿವಾರ ಹೇಳಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ನಗರಕ್ಕೆ ವಿದ್ಯುತ್‌ ಪೂರೈಸುವ ವಿದ್ಯುತ್‌ ಘಟಕಗಳಿಗೆ ಸಮರ್ಪಕವಾಗಿ ಕಲ್ಲಿದ್ದಲು ಮತ್ತು ಅನಿಲ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ದೆಹಲಿ ವಿದ್ಯುತ್‌ ಬಿಕ್ಕಟ್ಟನ್ನು ಎದುರಿಸಬಹುದು. ನಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇಂತಹ ಪರಿಸ್ಥಿತಿ ತಪ್ಪಿಸಲು ನಾವು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ. ಪರಿಸ್ಥಿತಿ ನಿವಾರಣೆಗೆ ಪ್ರಧಾನಿ ಅವರು ವೈಯಕ್ತಿಕವಾಗಿ ಇತ್ತ ಗಮನ ಹರಿಸಲು ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಕಳೆದ ಆಗಸ್ಟ್‌ನಿಂದ ದೆಹಲಿಯು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಕಳೆದ ಆಗಸ್ಟ್‌–ಸೆಪ್ಟೆಂಬರ್‌ನಿಂದ ಸತತ ಮೂರನೇ ತಿಂಗಳಲ್ಲಿ ಕಲ್ಲಿದ್ದಲು ಕೊರತೆಯುಂಟಾಗಿದೆ. ಇದರಿಂದ ದೆಹಲಿಗೆ ಪ್ರಮುಖ ವಿದ್ಯುತ್‌ ಪೂರೈಸುವ ‍ಪ್ರಮುಖ ವಿದ್ಯುತ್‌ ಸ್ಥಾವರಗಳ ಮೇಲೆ ಪರಿಣಾಮ ಉಂಟಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ವಿದ್ಯುತ್‌ ಸ್ಥಾವರಗಳಿಗೆ ಸಮರ್ಪಕವಾಗಿ ಕಲ್ಲಿದ್ದಲು ಮತ್ತು ಅನಿಲ ಪೂರೈಕೆಗೆ ಪ್ರಧಾನಿ ಮೋದಿ ಅವರು ಕ್ರಮ ಕೈಗೊಳ್ಳಬೇಕು’ ಎಂದು ಕೇಜ್ರಿವಾಲ್‌ ಪತ್ರದಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.