ನವದೆಹಲಿ: ಜಾರ್ಖಂಡ್ನ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡರಾದ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಮತ್ತು ಇತರೆ 14 ಮಂದಿಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರು, ಎಲ್ಲರಿಗೂ ತಲಾ ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೌಲ್ಯದ ಭದ್ರತೆ ಮೇಲೆ ಜಾಮೀನು ನೀಡಿದರು.
ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ನ ಸಲಹೆಗಾರ ಆನಂದ್ ಗೋಯಲ್, ಮುಂಬೈನ ಎಸ್ಸಾರ್ ಪವರ್ ಲಿಮಿಟೆಡ್ನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುಶೀಲ್ ಕುಮಾರ್ ಮರೂ, ನಿಹಾರ್ ಸ್ಟಾಕ್ಸ್ ಲಿಮಿಟೆಡ್ನ ನಿರ್ದೇಶಕ ಬಿ.ಎಸ್.ಎನ್ ಸೂರ್ಯನಾರಾಯಣನ್, ಮುಂಬೈ ಮೂಲದ ಕೆಇ ಅಂತರರಾಷ್ಟ್ರೀಯ ಮುಖ್ಯ ಆರ್ಥಿಕ ಅಧಿಕಾರಿ ರಾಜೀವ್ ಅಗರ್ವಾಲ್ ಮತ್ತು ಗುರುಗ್ರಾಮ ಮೂಲದ ಗ್ರೀನ್ ಇನ್ಫ್ರಾದ ಉಪಾಧ್ಯಕ್ಷ ಸಿದ್ಧಾರ್ಥ ಮದ್ರಾ ಅವರಿಗೆ ಜಾಮೀನು ಸಿಕ್ಕಿದೆ.
ಕೆ.ರಾಮಕೃಷ್ಣ ಪ್ರಸಾದ್, ರಾಜೀವ್ ಜೈನ್ ಮತ್ತು ಜ್ಞಾನ್ ಸ್ವರೂಪ್ ಗರ್ಗ್ ಅವರು ಸಹ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಜಾರ್ಖಂಡ್ನ ಅಮರಕೊಂಡ ಮುರ್ಗದಂಗಲ್ ಕಲ್ಲಿದ್ದಲು ನಿಕ್ಷೇಪವನ್ನು 2008ರಲ್ಲಿ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (ಜೆಎಸ್ಪಿಎಲ್) ಮತ್ತು ಗಗನ್ ಸ್ಪಾಂಜ್ ಐರನ್ ಪ್ರೈವೇಟ್ ಲಿಮಿಟೆಡ್ಗೆ (ಜಿಎಸ್ಐಪಿಎಲ್) ಹಂಚಿಕೆ ಮಾಡುವಾಗ ಅವ್ಯವಹಾರ ಎಸಗಿದ ಆರೋಪ ಇವರ ಮೇಲಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.