ನವದೆಹಲಿ: ಈ ಸಾಲಿನ ಪದ್ಮ (ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ) ಪ್ರಶಸ್ತಿಗಳಿಗಾಗಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಹೆಸರುಗಳನ್ನು ಶಿಫಾರಸು ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ʼಈ ವರ್ಷದ ಪದ್ಮ ಪ್ರಶಸ್ತಿಗಳಿಗಾಗಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಹೆಸರುಗಳನ್ನು ಕಳುಹಿಸಿಕೊಡಲು ದೆಹಲಿ ಸರ್ಕಾರ ನಿರ್ಧರಿಸಿದೆ. ನಾವು ಅವರಿಗೆ (ಆರೋಗ್ಯ ಕಾರ್ಯಕರ್ತರಿಗೆ) ಕೃತಜ್ಞರಾಗಿರುತ್ತೇವೆ ಮತ್ತು ಗೌರವ ಸಲ್ಲಿಸಲು ಬಯಸುತ್ತೇವೆʼ ಎಂದು ತಿಳಿಸಿದ್ದಾರೆ.
ʼಸಾರ್ವಜನಿಕರು ನಮಗೆ ಹೆಸರುಗಳನ್ನು ಸೂಚಿಸಲಿದ್ದಾರೆ. ಜನರು ಅವರ ಸಂದೇಶವನ್ನು padmaawards.delhi@gmail.comಗೆ ಆಗಸ್ಟ್ 15 ಮೇಲ್ ಮಾಡಬಹದುʼ ಎಂದು ಹೇಳಿದ್ದಾರೆ.
ʼನಾವು ಪರಾಮರ್ಶಕ ಸಮಿತಿ ರಚಿಸಿದ್ದು, ಆಗಸ್ಟ್ 15ರ ಬಳಿಕ ಪಟ್ಟಿ ಬಿಡುಗಡೆ ಮಾಡಲಿದೆ. ಸಮಿತಿಯು ಸರ್ಕಾರಕ್ಕೆ ನಾಮ ನಿರ್ದೇಶನ ಮಾಡಲಿದೆ. ಅದಾದ ಬಳಿಕ ಅಂತಿಮ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದುʼ ಎಂದೂ ಮಾಹಿತಿ ನೀಡಿದ್ದಾರೆ.
ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮತ್ತು ಶಿಫಾರಸುಗಳನ್ನು ಸರ್ಕಾರದ ವೆಬ್ಸೈಟ್ಗೆ ಸೆಪ್ಟೆಂಬರ್ 15ರ ವರೆಗೆ ಕಳುಹಿಸಿಕೊಡಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.