ನವದೆಹಲಿ: ಇಲ್ಲಿನ ವೃದ್ಧಾಶ್ರಮಗಳಲ್ಲಿರುವ ಹಿರಿಯರು ಉಚಿತವಾಗಿ ತೀರ್ಥಯಾತ್ರೆ ಕೈಗೊಳ್ಳಲು ‘ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆ’ ರೂಪಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಪೂರ್ವ ದೆಹಲಿಯ ಕಂಠಿನಗರದಲ್ಲಿ ‘ಡಾ.ಭೀಮ್ ರಾವ್ ಅಂಬೇಡ್ಕರ್ ಹಿರಿಯ ನಾಗರಿಕರ ನಿಲಯ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಈ ಹಿಂದೆಯೇ ದೆಹಲಿ ಸರ್ಕಾರ ಹಿರಿಯ ನಾಗರಿಕರನ್ನು ತೀರ್ಥ ಯಾತ್ರೆಗೆ ಕಳುಹಿಸಲು ಯೋಜನೆ ರೂಪಿಸಿತ್ತು. ಆದರೆ 2020 ಮತ್ತು 21ರಲ್ಲಿ ಕೋವಿಡ್ನಿಂದ ಸಾಧ್ಯವಾಗಿರಲಿಲ್ಲ. ಈಗ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ‘ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆ’ ಮೂಲಕ ಹಿರಿಯ ನಾಗರಿಕರು ಸರ್ಕಾರದ ವೆಚ್ಚದಲ್ಲಿ ತೀರ್ಥ ಯಾತ್ರೆ ಕೈಗೊಳ್ಳಬಹುದು’ ಎಂದು ತಿಳಿಸಿದರು.
‘ಹಿರಿಯ ಜೀವಗಳನ್ನು ಎಂದಿಗೂ ಮನೆಯಿಂದ ಹೊರಗೆ ಹಾಕಬಾರದು. ಆದರೂ ಕೆಲ ಕಾರಣಗಳಿಂದ ಹೊರ ಹಾಕಲ್ಪಟ್ಟವರಿಗೆ ಮನೆಯ ವಾತಾವರಣ ಕಲ್ಪಿಸುವ ಜತೆಗೆ ಅವರು ಸಂತೋಷದಿಂದಿರಲೂ ನಾವು ಪ್ರಯತ್ನಿಸುತ್ತಿದ್ದೇವೆ. ವೃದ್ಧಾಶ್ರಮ ಸೇರಿದೆವು ಎಂದು ಚಿಂತಿಸುವ ಅಗತ್ಯವಿಲ್ಲ. ನಾನು ನಿಮ್ಮ ಮಗನಾಗಿ ಆರೈಕೆ ಮಾಡುತ್ತೇನೆ’ ಎಂದರು.
‘ದೆಹಲಿಯಲ್ಲಿ ಈಗಾಗಲೇ ನಾಲ್ಕು ವೃದ್ಧಾಶ್ರಮಗಳಿವೆ. ಶೀಘ್ರವೇ ಇನ್ನೂ ಐದು ವೃದ್ಧಾಶ್ರಮಗಳನ್ನು ನಿರ್ಮಿಸಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.