ನವದೆಹಲಿ: ದೆಹಲಿ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ತಡೆ ಕುರಿತ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಮರಣದಂಡನೆ ತಡೆ ನೀಡಿರುವುದರ ಕುರಿತು ಕೇಂದ್ರ ಸರ್ಕಾರ ಹಾಗೂ ತಿಹಾರ್ ಜೈಲಿನ ಅಧಿಕಾರಿಗಳು ಸಲ್ಲಿಸಿರುವಅರ್ಜಿ ಮೇಲಿನ ವಿಚಾರಣೆಯನ್ನು ರಜಾ ದಿನವಾದ ಭಾನುವಾರವೂ ತುರ್ತಾಗಿ ವಿಚಾರಣೆ ನಡೆಸಲಾಯಿತು. ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕೇತ್ ಈ ಸಂಬಂಧ ಎರಡೂ ಕಡೆಯ ವಾದ ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ಯುವತಿಯ ಕುಟುಂಬದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಮ್ಮ ವಾದ ಮಂಡಿಸಿ, ಈಗಾಗಲೇ ಆರೋಪಿಗಳಾದ ಮುಖೇಶ್ ಹಾಗೂ ವಿನಯ್ ಶರ್ಮಾ ಅವರ ಕ್ಷಮಾಧಾನದ ಅರ್ಜಿಗಳನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ. ತಿರಸ್ಕರಿಸಿರುವವರಿಗೆ ಒಬ್ಬೊಬ್ಬರಾಗಿ ಮರಣದಂಡನೆ ವಿಧಿಸಲು ಕಾರಾಗೃಹ ಅಧಿಕಾರಿಗಳಿಗಾಗಲೀ ಸರ್ಕಾರದ್ದಾಗಲಿ ಯಾವುದೇ ತಕರಾರಿಲ್ಲ. ಈಗ ನೀಡಲಾಗಿರುವ ಮರಣದಂಡನೆ ಶಿಕ್ಷೆಯನ್ನು ಯಾವುದೇ ಕಾರಣಕ್ಕೂ ತಡಮಾಡಬಾರದು ಎಂದು ತಿಳಿಸಿದರು.
ಶಿಕ್ಷೆಗೆ ಒಳಗಾಗಿರುವ ಪವನ್ ಗುಪ್ತಾ ಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ ಎನ್ನುವ ಕಾರಣ ನೀಡಿರುವುದು ಕಾನೂನನ್ನು ನಿರಾಸೆಗೊಳಿಸುವುದಲ್ಲದೆ, ಮರಣದಂಡನೆಯನ್ನು ನಿಧಾನಗೊಳಿಸಲು ಬಳಸುತ್ತಿರುವ ತಂತ್ರವಾಗಿದೆ. ಒಂದು ವೇಳೆ ಮರಣದಂಡನೆ ತಡವಾದರೆ, ಆರೋಪಿಮೇಲೆ ಅಮಾನವೀಯ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಗುಪ್ತಾ ವಾದಿಸಿದರು.
ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ತಾನು ರಾಷ್ಟ್ರಪತಿಗಳ ಮುಂದೆ ಇನ್ನೂ ಕ್ಷಮಾದಾನದ ಅರ್ಜಿಯನ್ನು ಸಲ್ಲಿಸಿಲ್ಲ ಆದ್ದರಿಂದ ಮರಣದಂಡನೆ ತೀರ್ಪಿಗೆ ತಡೆ ನೀಡಬೇಕೆಂದು ಮನವಿ ಸಲ್ಲಿಸಿದ್ದ. ಅಪರಾಧಿಯ ಮನವಿಯಂತೆ ಮರಣದಂಡನೆ ಶಿಕ್ಷೆಗೆ ಮುಂದಿನ ಆದೇಶ ಬರುವವರೆಗೆ ತಡೆ ನೀಡಲಾಗಿದೆ.
ಶುಕ್ರವಾರ ದೆಹಲಿ ನ್ಯಾಯಾಲಯ ಫೆ.1ರಂದು ನಾಲ್ಕು ಮಂದಿಗೆ ವಿಧಿಸಬೇಕಾಗಿತ್ತು. ಅಪರಾಧಿಗಳ ಪರವಾಗಿ ಎ.ಪಿ.ಸಿಂಗ್ ವಾದ ಮಂಡಿಸಿ ಸಂವಿಧಾನದಲ್ಲಾಗಲೀ ಅಥವಾ ಸುಪ್ರೀಂ ಕೋರ್ಟ್ ಆಗಲಿ ಶಿಕ್ಷೆವಿಧಿಸಿದ ನಂತರ ಇಂತಿಷ್ಟೇ ದಿನದಲ್ಲಿ ಅದನ್ನು ಜಾರಿಗೊಳಿಸಬೇಕೆಂದು ಎಲ್ಲಿಯೂ ಸಮಯ ನಿಗದಿಪಡಿಸಿಲ್ಲ ಎಂದು ಹೇಳಿದರು.
ಶಿಕ್ಷೆ ಪ್ರತ್ಯೇಕ ಜಾರಿ ಬೇಡ: ಅಪರಾಧಿಗಳ ಪರ ವಕೀಲರಿಂದ ವಾದ
ನಿರ್ಭಯಾ ಪ್ರಕರಣದಲ್ಲಿ ಒಂದೇ ಆದೇಶದ ಮೂಲಕ ಗಲ್ಲು ವಿಧಿಸಿರುವುದರಿಂದ ನಾಲ್ವರಿಗೂ ಏಕಕಾಲಕ್ಕೆ ಶಿಕ್ಷೆ ಜಾರಿಗೊಳಿಸಬೇಕು. ಪ್ರತ್ಯೇಕವಾಗಿ ಯಾರಿಗೂ ಗಲ್ಲು ಶಿಕ್ಷೆ ವಿಧಿಸಬಾರದು ಎಂದು ಅಪರಾಧಿಗಳು ದೆಹಲಿ ಹೈಕೋರ್ಟ್ನಲ್ಲಿ ಭಾನುವಾರ ಪ್ರತಿಪಾದಿಸಿದರು.
ಅಪರಾಧಿಗಳಾದ ಮುಕೇಶ್ ಕುಮಾರ್, ಅಕ್ಷಯ್ ಸಿಂಗ್, ವಿನಯ್ ಶರ್ಮಾ ಮತ್ತು ಪವನ್ ಗುಪ್ತಾ ಪರ ವಾದ ಮಂಡಿಸಿದ ವಕೀಲರು, ಗಲ್ಲು ಶಿಕ್ಷೆ ವಿಧಿಸಲು ಕೆಲವರನ್ನು ಪ್ರತ್ಯೇಕಗೊಳಿಸಲು ಅವಕಾಶವಿಲ್ಲ. ನಿಯಮಗಳ ಪ್ರಕಾರ ಕೇಂದ್ರ ಅಥವಾ ದೆಹಲಿ ಸರ್ಕಾರಕ್ಕೂ ಅಧಿಕಾರ ಇಲ್ಲ ಎಂದು ವಾದಿಸಿದರು.
ಮುಂದಿನ ಆದೇಶದವರೆಗೆ ನಾಲ್ವರಿಗೂ ಗಲ್ಲು ಶಿಕ್ಷೆ ವಿಧಿಸಬಾರದು ಎಂದು ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶ ಪ್ರಶ್ನಿಸಿ ಕೇಂದ್ರ ಮತ್ತು ದೆಹಲಿ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ವಕೀಲರು ಈ ವಾದ ಮಂಡಿಸಿದರು.
ಕೇಂದ್ರ ಸರ್ಕಾರ ಗಲ್ಲು ಶಿಕ್ಷೆ ಜಾರಿಗೊಳಿಸುವುದನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸುತ್ತಿದೆ. ಆದರೆ, ಸರ್ಕಾರ ಎರಡು ದಿನಗಳ ಹಿಂದೆಯಷ್ಟೇ ಈ ಬಗ್ಗೆ ಎಚ್ಚೆತ್ತುಕೊಂಡಿದೆ ಎಂದು ಹಿರಿಯ ವಕೀಲ ರೆಬೆಕ್ಕಾ ಜಾನ್ ವಾದಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.