
ಚಾಂದಿನಿ ಚೌಕ ಪ್ರದೇಶ
ನವದೆಹಲಿ: ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ದೆಹಲಿ ಮಾರುಕಟ್ಟೆ ಈಗ ಬಣಗುಡುತ್ತಿದೆ. ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡ ಬಳಿಕ ದೆಹಲಿ ಜನ ಬೆಚ್ಚಿಬಿದ್ದಿದ್ದಾರೆ. ಹೊರಗಿನಿಂದ ಬರುವ ವ್ಯಾಪಾರಿಗಳು ಅಂಗಡಿಗಳಿಗೆ ಬರುವ ಬದಲು ಆನ್ಲೈನ್ ಆರ್ಡರ್ನತ್ತ ಮುಖಮಾಡಿದ್ದಾರೆ.
ಸೋಮವಾರ ಸಂಜೆ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ದೆಹಲಿಯ ಸಗಟು ಮಾರುಕಟ್ಟೆಗಳಾದ ಸದಾರ್ ಬಜಾರ್, ಚಾಂದಿನಿ ಚೌಕ್ ಮೇಲೆ ಪರಿಣಾಮ ಬೀರಿದೆ. ಹಬ್ಬ, ಮದುವೆಗಳ ಋತುವಿನಲ್ಲಿ ಜನಸಂದಣಿಯಿಂದ ಕೂಡಿರುತ್ತಿದ್ದ ಬೀದಿಗಳು ಬಿಕೋ ಎನ್ನುತ್ತಿವೆ.
‘ಸಾಮಾನ್ಯವಾಗಿ ಈ ಸಮಯದಲ್ಲಿ ಮದುವೆ ಮತ್ತು ಚಳಿಗಾಲದ ವಸ್ತುಗಳ ಖರೀದಿಗೆ ಬೇರೆ ರಾಜ್ಯಗಳಿಂದ ವ್ಯಾಪಾರಿಗಳು ಬರುತ್ತಿದ್ದರು. ಆದರೆ ಈಗ ಹೆಚ್ಚಿನವರು ಆನ್ಲೈನ್ ಖರೀದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಸದಾರ್ ಬಜಾರ್ ಅಸೋಸಿಯೇಷನ್ನ ಅಧ್ಯಕ್ಷ ಪರಮಜೀತ್ ಸಿಂಗ್ ಪಮ್ಮಾ ಹೇಳಿದ್ದಾರೆ.
‘ಸ್ಫೋಟದ ಬಳಿಕ ಶೇ 50 ರಷ್ಟು ವ್ಯಾಪಾರ ಕುಸಿದಿದೆ. ಪ್ರತಿಯೊಬ್ಬರ ಸುರಕ್ಷತೆಗೆ ಸ್ಥಳೀಯ ಪೊಲೀಸರು ಮತ್ತು ಅಸೋಸಿಯೇಷನ್ ಜಂಟಿಯಾಗಿ ಬಜಾರ್ನಲ್ಲಿ ಕೆಲಸ ಮಾಡುವವರನ್ನು ಪರಿಶೀಲನೆ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
‘ವ್ಯಾಪಾರ ಸಂಪೂರ್ಣವಾಗಿ ನಿಧಾನಗೊಂಡಿದೆ. ಎಲ್ಲವೂ ಸಹಜ ಸ್ಥಿತಿಗೆ ಬರಲು ಕನಿಷ್ಠ ತಿಂಗಳುಗಳ ಕಾಲ ಬೇಕು. ಜನರು ಖರೀದಿಗೆ ಬರಲು ಹಿಂಜರಿಯುತ್ತಿದ್ದಾರೆ. ಸ್ಫೋಟ ನಡೆದ ಸ್ಥಳದಲ್ಲಿ ಇರುವ ಅಂಗಡಿ ಮಾಲೀಕರು ಈಗಲೂ ಅಂಗಡಿ ತೆರೆಯಲು ಅಂಜುತ್ತಿದ್ದಾರೆ’ ಎಂದು ಚಾಂದಿನಿ ಚೌಕ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂಜಯ್ ಭಾರ್ಗವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.