ADVERTISEMENT

ಪಟಾಕಿ ಪರಿಣಾಮ: ದೆಹಲಿಯಲ್ಲಿ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿ...

ಏಜೆನ್ಸೀಸ್
Published 8 ನವೆಂಬರ್ 2018, 3:07 IST
Last Updated 8 ನವೆಂಬರ್ 2018, 3:07 IST
   

ನವದೆಹಲಿ:ದೀಪಾವಳಿ ಹಬ್ಬಕ್ಕೂ ಮುನ್ನವೇ ದೆಹಲಿಯಲ್ಲಿ ಹೊಗೆ ಮಿಶ್ರಿತ ದಟ್ಟ ಮಂಜು ಆವರಿಸಿತ್ತು, ಮಂಗಳವಾರ ಮತ್ತು ಬುಧವಾರ ಪಟಾಕಿ ಸಿಡಿಸಿದ ಪರಿಣಾಮ ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟವನ್ನು ಮೀರಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಗುರುವಾರ ತಿಳಿಸಿದೆ.

ಇದರ ಪರಿಣಾಮ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಲಿವೆ ಎಂದು ವೈದ್ಯರು ತಿಳಿಸಿದ್ದಾರೆ. ವಾಯು ಅಪಾಯಕಾರಿ ಮಟ್ಟವನ್ನು ತಲುಪಿರುವುದರಿಂದ ಗುರುವಾರ ಬೆಳಗ್ಗೆ ಜನಸಾಮಾನ್ಯರು ಮುಖಗವಸು ಧರಿಸಿಕೊಂಡು ನಿತ್ಯದ ಕೆಲಸಗಳಿಗೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತುಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಕಳೆದ ಸೋಮವಾರ ಸಿಪಿಸಿಬಿ ದೆಹಲಿಯಲ್ಲಿ ವಾಯುಗುಣಮಟ್ಟ ಅಪಾಯಕಾರಿ ಮಟ್ಟವನ್ನು ಮೀರಿದೆ ಎಂದು ಹೇಳಿತ್ತು. ಇದೀಗ ದೀಪಾವಳಿ ಪಟಾಕಿಯ ಹೊಗೆ ಗಾಳಿಯನ್ನು ಮತ್ತಷ್ಟು ಮಲೀನಗೊಳಿಸಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ADVERTISEMENT

ಸುಪ್ರೀಂ ಕೋರ್ಟ್‌ ಪರಿಸರ ಸ್ನೇಹಿ ಪಟಾಕಿ ಸಿಡಿಸುವುದು ಮತ್ತು ರಾತ್ರಿ 8 ಗಂಟೆಯಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸುವಂತೆ ಸೂಚನೆ ನೀಡಿದ್ದರೂದೆಹಲಿಯಲ್ಲಿ ಇದು ಪಾಲನೆಯಾಗಿಲ್ಲ ಎಂದು ಸಿಪಿಸಿಬಿ ತಿಳಿಸಿದೆ.

ಬುಧವಾರ ರಾತ್ರಿವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ದಲ್ಲಿ ಸಾಕಷ್ಟು ಏರಿಕೆ ಕಂಡುಬಂದಿದೆ. ಇದಕ್ಕೆ ಪಟಾಕಿ ಸಿಡಿಸಿರುವುದೇ ಕಾರಣ. ರಾತ್ರಿ 7 ಗಂಟೆಗೆ ಎಕ್ಯೂಐ 281 ಪ್ರಮಾಣದಷ್ಟಿತ್ತು. ಇದು 8 ಗಂಟೆಯ ವೇಳೆಗೆ 291ಕ್ಕೆ ಏರಿಕೆಯಾಗಿತ್ತು. 9 ಗಂಟೆಗೆ ಮತ್ತೆ ವಾಯು ಗುಣಮಟ್ಟ ಪರೀಕ್ಷೆ ಮಾಡಿದಾಗ 294ರ ಪ್ರಮಾಣಕ್ಕೆ ಏರಿಕೆಯಾಗಿತ್ತು ಎಂದು ಸಿಪಿಸಿಬಿ ತಿಳಿಸಿದೆ.

ನವೆಂಬರ್‌ 10ರ ವರೆಗೂ ಮಾಲಿನ್ಯಕಾರಕ ವಾಹನಗಳ ತಪಾಸಣೆ ನಡೆಸುವಂತೆ ಸಂಚಾರಿ ಪೊಲೀಸರಿಗೆ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ ಸೂಚನೆ ನೀಡಿತ್ತು. ಭೂಮಿ ತೋಡುವುದು ಸೇರಿದಂತೆ ಧೂಳು ಇಮ್ಮಡಿಸುವ ಕಟ್ಟಡ ನಿರ್ಮಾಣ ಕಾರ್ಯಗಳನ್ನು ನಡೆಸುವಂತಿಲ್ಲ; ಕಲ್ಲು ಪುಡಿ ಮಾಡುವ ಯಂತ್ರಗಳ ಬಳಕೆಗೂ ನಿಷೇಧ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.