ADVERTISEMENT

ಸಂಸತ್ ಮೇಲೆ ಪನ್ನೂ ದಾಳಿ ಬೆದರಿಕೆ: ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು

ಪಿಟಿಐ
Published 6 ಡಿಸೆಂಬರ್ 2023, 7:49 IST
Last Updated 6 ಡಿಸೆಂಬರ್ 2023, 7:49 IST
Venugopala K.
   Venugopala K.

ನವದೆಹಲಿ: 2001ರ ಸಂಸತ್ತಿನ ಮೇಲೆ ನಡೆದ ದಾಳಿ ಗುರುತಿಸುವ ದಿನವಾದ ಡಿಸೆಂಬರ್ 13ರಂದು ಅಥವಾ ಅಥವಾ ಅದಕ್ಕೂ ಮುನ್ನ ಸಂಸತ್ತಿನ ಬುನಾದಿ ಅಲುಗಾಡಿಸುವುದಾಗಿ ಅಮೆರಿಕ ಮೂಲದ ಖಾಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂ ಬೆದರಿಕೆ ಹಾಕಿರುವ ವಿಡಿಯೊ ಸಂದೇಶ ಹೊರಬೀಳುತ್ತಿದ್ದಂತೆ ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ.

ಸಂಸತ್ತಿನ ಸುತ್ತಮುತ್ತ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದೂ ಅವರು ಹೇಳಿದ್ದಾರೆ.

‘ಸಂಸತ್ತಿನ ಅಧಿವೇಶನ ನಡೆಯುತ್ತಿದ್ದು, ನಾವು ಬಹಳ ಜಾಗರೂಕರಾಗಿರುತ್ತೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ’ಎಂದು ಅಧಿಕಾರಿ ಹೇಳಿದ್ದಾರೆ. ಇಡೀ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ADVERTISEMENT

2001ರ ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವಿನ ಫೋಟೊ ಹೊಂದಿರುವ ವಿಡಿಯೊದಲ್ಲಿ ಮಾತನಾಡಿರುವ ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಮುಖ್ಯಸ್ಥ ಪನ್ನೂ, ನರೇಂದ್ರ ಮೋದಿ ಸರ್ಕಾರವು ನನ್ನನ್ನು ಕೊಲ್ಲಲು ಪ್ರಯತ್ನಿಸಿದೆ ಮತ್ತು ಡಿಸೆಂಬರ್ 13ರಂದು ಅಥವಾ ಅದಕ್ಕೂ ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.

ಅಮೆರಿಕ ಸರ್ಕಾರದ ಮನವಿ ಮೇರೆಗೆ ಭಾರತ ಮೂಲದ ಮಾದಕ ದ್ರವ್ಯ ಸಾಗಣೆದಾರ ನಿಖಿಲ್ ಗುಪ್ತಾನನ್ನು ಜೂನ್ 30ರಂದು ಜೆಕ್ ಗಣರಾಜ್ಯದ ಪೊಲೀಸರು ರಾಜಧಾನಿ ಪ್ರಾಗ್‌ನಲ್ಲಿ ಬಂಧಿಸಿದ್ದರು. ಈತ ಪನ್ನೂ ಅವರನ್ನು ಕೊಲ್ಲಲು ಒಬ್ಬ ರಹಸ್ಯ ಭಾರತೀಯ ಪೊಲೀಸ್‌ ಅಧಿಕಾರಿಯೊಂದಿಗೆ ಕೆಲಸ ಮಾಡಿದ ಮತ್ತು ಡ್ರಗ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿಯ (ಡಿಇಎ) ಮಾಹಿತಿದಾರನನ್ನು ನೇಮಿಸಿದ ಆರೋಪ ಎದುರಿಸುತ್ತಿದ್ದಾನೆ.

ಈ ಸುದ್ದಿ ಹೊರಬೀಳುತ್ತಿದ್ಂತೆ, ಅಮೆರಿಕದ ಖಾಲಿಸ್ತಾನಿ ಹೋರಾಟಗಾರರು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರಿಯನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.