ನವದೆಹಲಿ: ಥಾಯ್ಲೆಂಡ್ ಮತ್ತು ಮಲೇಷಿಯಾಗೆ ಪ್ರಯಾಣ ಬೆಳೆಸಿ ಹಿಂತಿರುಗಿದ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಮೂಲಕ ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ದೆಹಲಿಯ ಉತ್ತಮ ನಗರದ ನಿವಾಸಿಯಾಗಿರುವ ವ್ಯಕ್ತಿಯು ಥಾಯ್ಲೆಂಡ್ ಮತ್ತು ಮಲೇಷಿಯಾಗೆ ಪ್ರಯಾಣ ಬೆಳೆಸಿದ್ದರು. ಸದ್ಯ ರೋಗಿಯನ್ನು ಸೂಕ್ಷ್ಮ ನಿಗಾದಲ್ಲಿಡಲಾಗಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರವಷ್ಟೇ ಘಾಜಿಯಾಬಾದ್ ಮೂಲದ ಮಧ್ಯ ವಯಸ್ಕ ವ್ಯಕ್ತಿ ಇರಾನ್ಗೆ ಪ್ರಯಾಣ ಬೆಳೆಸಿ ಹಿಂತಿರುಗಿದ ಬಳಿಕ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸೆಂಟ್ರಲ್ ದೆಹಲಿಯಲ್ಲಿ ನಾಲ್ಕು ಪ್ರಕರಣಗಳು, ದೆಹಲಿಯಲ್ಲಿ ಎರಡು ಮತ್ತು ಘಾಜಿಯಾಬಾದ್ ಮತ್ತು ಗುರುಗ್ರಾಮದ ತಲಾ ಒಬ್ಬೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬುಧವಾರದವರೆಗೂ ಇಟಲಿಯ 16 ಪ್ರವಾಸಿಗರು ಸೇರಿದಂತೆ ಭಾರತದಲ್ಲಿ 29 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿತ್ತು. ದೇಶದಲ್ಲೇ ಮೊದಲ ಬಾರಿಗೆ ಸೋಂಕು ದೃಢಪಟ್ಟಿದ್ದ ಕೇರಳದ ಮೂವರು ಇತ್ತೀಚೆಗಷ್ಟೇ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.
ಕೋವಿಡ್-19 ಸೋಂಕು ಪೀಡಿತರ ಚಿಕಿತ್ಸೆಗಾಗಿಯೇ ದೆಹಲಿಯ ಲೋಕ್ ನಾಯಕ್ ಜೈಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ 11 ಪ್ರತ್ಯೇಕ ಕೊಠಡಿ ಮತ್ತು ಪ್ರತ್ಯೇಕ ವಾರ್ಡ್ಗಳನ್ನು ತೆರೆಯಲಾಗಿದೆ ಎಂದು ಸರ್ಕಾರವು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.