ADVERTISEMENT

ಬಟ್ಟೆ ಖರೀದಿಗೆ ಹಣವಿಲ್ಲ, ಕ್ರೆಡಿಟ್ ಕಾರ್ಡ್‌ ಕೊಡಿ ಎಂದು ಅಫ್ತಾಬ್‌ ಅರ್ಜಿ

ಪಿಟಿಐ
Published 6 ಜನವರಿ 2023, 14:36 IST
Last Updated 6 ಜನವರಿ 2023, 14:36 IST
   

ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲಕರ್‌ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಅವರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹಿಂದಿರುಗಿಸುವಂತೆ ಶುಕ್ರವಾರ ಆತನ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪೂನಾವಾಲಾ ಜೈಲಿನೊಳಗೆ ಚಳಿಯಿಂದ ಬಳಲುತ್ತಿದ್ದಾರೆ ಮತ್ತು ಅವರ ಬಳಿ ಸಾಕಷ್ಟು ಬಟ್ಟೆಗಳಿಲ್ಲ. ಆದ್ದರಿಂದ, ದಿನನಿತ್ಯದ ವಸ್ತುಗಳು ಮತ್ತು ಬೆಚ್ಚಗಿನ ಬಟ್ಟೆಗಳನ್ನು ಖರೀದಿಸಲು ಹಣದ ತುರ್ತು ಅಗತ್ಯವಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.‌

‘ಆರೋಪಿಯು ತನ್ನ ಬ್ಯಾಂಕ್ ಖಾತೆಗಳಲ್ಲಿ ಸ್ವಲ್ಪ ಹಣ ಹೊಂದಿದ್ದಾರೆ. ಆದರೆ ಅವರ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್‌ಗಳನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದು, ಅದನ್ನು ಹಿಂದಿರುಗಿಸಬೇಕೆಂದು’ ವಕೀಲರು ಕೋರಿದ್ದಾರೆ.

ADVERTISEMENT

28ರ ಹರೆಯದ ಪೂನಾವಾಲಾ ಅವರನ್ನು ನ್ಯಾಯಾಂಗ ಬಂಧನ ಅವಧಿ ಮುಗಿದ ಕೂಡಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲಕರ್‌ ಹತ್ಯೆಗೈದು, ಆಕೆಯ ದೇಹವನ್ನು 35 ತುಂಡುಗಳಾಗಿಸಿ ಎಸೆದಿದ್ದ ಪ್ರಕರಣದಲ್ಲಿ ಅಫ್ತಾಬ್‌ ಜೈಲು ಪಾಲಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.