ADVERTISEMENT

ಪಂಜಾಬ್‌: 3 ಪೊಲೀಸ್‌ ಅಧಿಕಾರಿಗಳಿಗೆ ದೆಹಲಿ ಸ್ಪೀಕರ್‌ ನೋಟಿಸ್‌ 

ಪಿಟಿಐ
Published 10 ಜನವರಿ 2026, 15:34 IST
Last Updated 10 ಜನವರಿ 2026, 15:34 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ವಿಧಾನಸಭೆಯ ವಿಡಿಯೊ ತುಣುಕಿನ ಆಧಾರದ ಮೇಲೆ ದೆಹಲಿ ಕಾನೂನು ಸಚಿವ ಕಪಿಲ್‌ ಮಿಶ್ರಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಪಂಜಾಬ್‌ ಪೊಲೀಸ್‌ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ದೆಹಲಿ ವಿಧಾನಸಭೆಯ ಸ್ಪೀಕರ್‌ ವಿಜೇಂದರ್‌ ಗುಪ್ತಾ ಶನಿವಾರ ತಿಳಿಸಿದರು.

ದೆಹಲಿ ವಿಧಾನಸಭೆಯ ಹಕ್ಕುಚ್ಯುತಿ ಮಾಡಿರುವ ಆರೋಪದ ಮೇರೆಗೆ ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ), ವಿಶೇಷ ಡಿಜಿಪಿ (ಸೈಬರ್‌ ಅಪರಾಧ) ಮತ್ತು ಜಲಂದರ್‌ ಪೊಲೀಸ್‌ ಕಮಿಷನರ್‌ ಅವರಿಗೆ ನೋಟಿಸ್‌ ನೀಡಲಾಗಿದ್ದು, 48 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ಗುಪ್ತಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ದೆಹಲಿ ವಿಧಾನಸಭೆಯಲ್ಲಿನ ವಿಡಿಯೊ ತುಣುಕನ್ನು ಆಧರಿಸಿ ಪಂಜಾಬ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿರುವುದು ದುರದೃಷ್ಟಕರ’ ಎಂದ ಅವರು, ‘ಪೊಲೀಸರ ಈ ಕ್ರಮವು ಸದನದ ಗೌರವಕ್ಕೆ ಚ್ಯುತಿ ತಂದಿದೆ’ ಎಂದರು.

ನೋಟಿಸ್‌ಗೆ ಪ್ರತಿಕ್ರಿಯೆ ಬಂದ ಬಳಿಕ ಆ ಅಧಿಕಾರಿಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗುವುದು ಎಂದು ಅವರು ಉತ್ತರಿಸಿದರು. 

ವಿರೋಧ ಪಕ್ಷದ ನಾಯಕಿ ಅತಿಶಿ ಅವರು ವಿಧಾನಸಭೆಯಲ್ಲಿ ಗುರುತೇಜ್‌ ಬಹದ್ದೂರ್‌ ಅವರನ್ನು ಅವಮಾನಿಸಿದ್ದಾರೆ ಎಂದು ಸಚಿವ ಕಪಿಲ್‌ ಮಿಶ್ರಾ ಮತ್ತು ಕೆಲ ಬಿಜೆಪಿ ಶಾಸಕರು ಆರೋಪಿಸಿದ್ದರು. 

ಅತಿಶಿ ಅವರು ಹೇಳಿದ್ದನ್ನು ತಿರುಚಿರುವ ವಿಡಿಯೊವನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿರುವ ಜಲಂಧರ್‌ ಪೊಲೀಸ್‌ ಕಮಿಷನರೇಟ್‌, ಮಿಶ್ರಾ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.  

ಪಂಜಾಬ್‌ನ ಎಎಪಿ ಆಡಳಿತವು ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಸ್ಪೀಕರ್‌ ದೂರಿದರು. ಸಿಖ್‌ ಗುರುವನ್ನು ಅಮಾನಿಸಿರುವ ಅತಿಶಿ ಅವರ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.