ನವದೆಹಲಿ: ‘ಸುಪ್ರೀಂ ಕೋರ್ಟ್ ತೀರ್ಪನ್ನೂ ನಿರ್ಲಕ್ಷಿಸಿ ಲೆಫ್ಟಿನೆಂಟ್ ಗವರ್ನರ್ಗೆ ಆಡಳಿತಾತ್ಮಕ ಸೇವೆಗಳ ನಿಯಂತ್ರಣವನ್ನು ನೀಡುವ ಸಂಬಂಧ ಕೇಂದ್ರ ಸರ್ಕಾರವು ‘ಕರಾಳ ಸುಗ್ರೀವಾಜ್ಞೆ’ಯನ್ನು ಹೊರಡಿಸಿದೆ’ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಸೋಮವಾರ ಆರೋಪಿಸಿದೆ.
ಈ ಸುಗ್ರೀವಾಜ್ಞೆಯನ್ನು ವಿರೋಧಿಸಲು ಜೂನ್ 11ರಂದು ರಾಮಲೀಲಾ ಮೈದಾನದಲ್ಲಿ ‘ಮಹಾ ರ್ಯಾಲಿ’ ಆಯೋಜಿಸುವುದಾಗಿ ಪಕ್ಷ ಹೇಳಿದೆ.
‘ಕೇಂದ್ರ ಸರ್ಕಾರವು ಇಂಥ ಸುಗ್ರೀವಾಜ್ಞೆಯ ಮೂಲಕ ದೇಶದಲ್ಲಿ ‘ಸರ್ವಾಧಿಕಾರಿ ನಿರ್ಧಾರಗಳನ್ನು’ ಹೇರಲು ಹೊರಟಿದೆ. ಆದ್ದರಿಂದ ಜನರು ಈ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಪಕ್ಷದ ದೆಹಲಿ ಸಂಚಾಲಕ ಗೋಪಾಲ್ ರೈ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ತೀರ್ಮಾನ ಕೈಗೊಳ್ಳದ ಕಾಂಗ್ರೆಸ್: ಎಎಪಿ ಆಯೋಜಿಸಲು ನಿರ್ಧರಿಸಿರುವ ‘ಮಹಾ ರ್ಯಾಲಿ’ಗೆ ಬೆಂಬಲ ಸೂಚಿಸುವ ಸಂಬಂಧ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಪಕ್ಷವು ಸುಗ್ರೀವಾಜ್ಞೆ ವಿರೋಧಿಸಿ ಎಎಪಿಗೆ ಬೆಂಬಲ ಸೂಚಿಸಲಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, ‘ಪಕ್ಷವು ಈ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪಕ್ಷದ ದೆಹಲಿ ಘಟಕ ಹಾಗೂ ಇತರ ಸಮಾನ ಮನಸ್ಕ ಪಕ್ಷಗಳೊಂದಿಗೆ ಸಮಾಲೋಚಿಸಿ ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.