ನವದೆಹಲಿ: ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಬುಧವಾರವೂ ಸಂಸತ್ನ ಉಭಯ ಸದನಗಳಲ್ಲಿ ಕಲಾಪಕ್ಕೆ ಅವಕಾಶ ದೊರೆಯಲಿಲ್ಲ.
ಲೋಕಸಭೆಯಲ್ಲಿ ಎರಡು ಬಾರಿ ಕಲಾಪ ಮುಂದೂಡಿದ ನಂತರವೂ ವಿಪಕ್ಷ ಸದಸ್ಯರು ಪ್ರತಿಭಟನೆ ಕೈಬಿಡಲಿಲ್ಲ.
ಮಧ್ಯಾಹ್ನ 2 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗದ್ದಲದ ನಡುವೆಯೇ ನೇರ ತೆರಿಗೆಗಳ (ವಿವಿಧೆಡೆಯಿಂದ ವಿಶ್ವಾಸದೆಡೆಗೆ) ಮಸೂದೆ ಮಂಡಿಸಿದರು. ಈ ಸಂದರ್ಭ ಸ್ಪೀಕರ್ ಪೀಠದ ಎದುರು ಜಮಾಯಿಸಿದ ವಿರೋಧ ಪಕ್ಷಗಳ ಸದಸ್ಯರ ಘೋಷಣೆ ಮುಂದುವರಿದಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲಿ ಕಲಾಪ ಆರಂಭ ಆಗುತ್ತಿದ್ದಂತೆಯೇ ವಿರೋಧ ಪಕ್ಷಗಳ ಸದಸ್ಯರಿಂದ ಘೋಷಣೆಗಳು ಕೇಳಿಬಂದಿದ್ದರಿಂದ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.