ಲೋಕಸಭೆ
ನವದೆಹಲಿ: ಮುಂಬರುವ ಕ್ಷೇತ್ರಗಳ ಪುನರ್ವಿಂಗಡನೆಯು ಜನಸಂಖ್ಯೆ ನಿಯಂತ್ರಣ ಮಾಡಿರುವ ತಮಿಳುನಾಡಿನಂತಹ ರಾಜ್ಯಗಳ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಡಿಎಂಕೆ ಸದಸ್ಯ ಡಿ.ಎಂ. ಕತೀರ್ ಆನಂದ್ ಬುಧವಾರ ಹೇಳಿದ್ದಾರೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಎಲ್ಲಾ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
‘ಕ್ಷೇತ್ರ ಪುನರ್ ವಿಂಗಡನೆ ವೇಳೆ ಕೇವಲ ಜನಸಂಖ್ಯೆಯನ್ನು ಮಾತ್ರ ಮಾನದಂಡವನ್ನಾಗಿರಿಸದೆ, ರಾಜ್ಯದ ಒಟ್ಟು ದೇಶೀಯ ಉತ್ಪನ್ನ, ತಲಾ ಆದಾಯ, ಮೂಲಭೂತ ಅಭಿವೃಧ್ಧಿಯನ್ನೂ ಪರಿಗಣಿಸಬೇಕು’ ಎಂದು ಅವರು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಹೇಳಿದ್ದಾರೆ.
ಬಾಂಗ್ಲಾದೇಶದ ಪ್ರಜೆಗಳು ಪಶ್ಚಿಮ ಬಂಗಾಳ ಗಡಿ ಮೂಲಕ ಅಕ್ರಮವಾಗಿ ಪ್ರವೇಶ ಮಾಡುತ್ತಿದ್ದಾರೆ, ಕ್ಷೇತ್ರ ಪುನರ್ವಿಂಗಡನೆ ವೇಳೆ ಅವರನ್ನು ಕೇಂದ್ರ ಸರ್ಕಾರ ಹೊರಗಿಡಬೇಕು ಎಂದು ಬಿಜೆಪಿಯ ನಿಶಿಕಾಂತ್ ದುಬೆ ಆಗ್ರಹಿಸಿದ್ದಾರೆ.
‘1951ರ ಜನಗಣತಿಗೆ ಹೋಲಿಸಿದರೆ, 2011ರಲ್ಲಿ ಜಾರ್ಖಂಡ್ನಲ್ಲಿ ಆದಿವಾಸಿಗಳ ಜನಸಂಖ್ಯೆ ಕುಸಿದಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗಿದೆ. ಮುಸ್ಲಿಂ ನುಸುಳುಕೋರರು ಬಲವಂತವಾಗಿ ಆದಿವಾಸಿ ಮಹಿಳೆಯರನ್ನು ಮದುವೆಯಾಗಿ ಅವರನ್ನು ಮತಾಂತರ ಮಾಡುತ್ತಿದ್ದಾರೆ. ಕ್ಷೇತ್ರ ಪುನರ್ವಿಂಗಡನೆ ವೇಳೆ ಸರ್ಕಾರ ಇದನ್ನು ಗಮನಿಸಬೇಕು’ ಎಂದು ದುಬೆ ಹೇಳಿದ್ದಾರೆ.
ಡಿಎಂಕೆಯ ಆನಂದ್ ಕೂಡ ಈ ಬಗ್ಗೆ ಶೂನ್ಯ ವೇಳೆಯಲ್ಲಿ ಧ್ವನಿ ಎತ್ತಿದ್ದು, ಜನಸಂಖ್ಯೆ ನಿಯಂತ್ರಣ ಮಾಡಿದ್ದರಿಂದ ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಭರವಸೆ ನೀಡಿಲ್ಲ. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡಿನ ಜಸನಂಖ್ಯೆ ಭಾರಿ ಕಡಿಮೆ ಇದ್ದು, ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ವಿಂಗಡನೆ ತಮಿಳುನಾಡಿಗೆ ಅನ್ಯಾಯವೆಸಗಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.