ADVERTISEMENT

ಭಿನ್ನಾಭಿಪ್ರಾಯವನ್ನು ಸಮನ್ವಯಗೊಳಿಸುವ ಸಾಮರ್ಥ್ಯ ಪ್ರಜಾಪ್ರಭುತ್ವಕ್ಕಿದೆ: ಕೋವಿಂದ್

ಶ್ರೀನಗರದಲ್ಲಿರುವ ಕಾಶ್ಮೀರ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ

ಪಿಟಿಐ
Published 27 ಜುಲೈ 2021, 9:00 IST
Last Updated 27 ಜುಲೈ 2021, 9:00 IST
ಜ‌ಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್‌ಕೋವಿಂದ್ ಅವರು ಸೋಮವಾರ ಕಾಶ್ಮೀರದ ಗುಲ್‌ಮಾರ್ಗ್‌ನಲ್ಲಿರುವ ಸೈನಿಕ ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡಿದರು.
ಜ‌ಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್‌ಕೋವಿಂದ್ ಅವರು ಸೋಮವಾರ ಕಾಶ್ಮೀರದ ಗುಲ್‌ಮಾರ್ಗ್‌ನಲ್ಲಿರುವ ಸೈನಿಕ ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡಿದರು.   

ಶ್ರೀನಗರ: ‘ಎಲ್ಲ ಭಿನ್ನಾಭಿಪ್ರಾಯಗಳನ್ನು ಕ್ರೋಡೀಕರಿಸಿ ಉತ್ತಮವಾದುದನ್ನು ಹೊರತರುವ ಸಾಮರ್ಥ್ಯ ಪ್ರಜಾಪ್ರಭುತ್ವಕ್ಕೆ ಇದೆ ಎಂಬುದು ಕಾಶ್ಮೀರದ ಜನರಿಗೆ ಈಗ ಮನದಟ್ಟಾಗುತ್ತಿದೆ’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಪಾದಿಸಿದರು.

ನಾಲ್ಕು ದಿನಗಳ ಪ್ರವಾಸಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ರಾಮನಾಥ್ ಕೋವಿಂದ್ ಅವರು ಮಂಗಳವಾರ ಇಲ್ಲಿನ ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಶಾಂತಿ ಸಹಬಾಳ್ವೆಯೇ ಸಂಪ್ರದಾಯವಾಗಿದ್ದ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿರುವುದು ದುರದೃಷ್ಟಕರ. ಈ ಹಿಂಸಾಚಾರ ಎಂದೂ ಕಾಶ್ಮೀರದ ಭಾಗವಾಗಿರಲಿಲ್ಲ. ಆದರೆ, ಈಗ ನಿತ್ಯದ ಸಂಗತಿಯಾಗಿದೆ‘ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಹಿಂಸೆ ಎನ್ನುವುದು ಕಾಶ್ಮೀರ ಸಂಸ್ಕೃತಿಗೆ ಹೊರಗಿನಿಂದ ಬಂದು ಸೇರಿಕೊಂಡಿದೆ. ಇದೊಂದು ರೀತಿ ದಾರಿ ತಪ್ಪಿ ಬಂದಿದೆ ಎಂದು ಹೇಳಬಹುದು. ದೇಹದ ಮೇಲೆ ವೈರಸ್ ದಾಳಿ ಮಾಡಿದಂತಾಂಗಿರುವ ಈ ಹಿಂಸಾಚಾರವನ್ನು ನಿವಾರಿಸುವ ಅಗತ್ಯವಿದೆ‘ ಎಂದು ಹೇಳಿದರು.

‘ಕಾಶ್ಮೀರ, ಹಲವು ಸಂಸ್ಕೃತಿಗಳ ಸಂಗಮದ ತಾಣ’ ಎಂದು ಬಣ್ಣಿಸಿದ ರಾಮನಾಥ ಕೋವಿಂದ್‌, ‘ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಹೊಸ ಪ್ರಕ್ರಿಯೆಗಳು ಆರಂಭವಾಗಿವೆ. ಕಣಿವೆ ರಾಜ್ಯದಲ್ಲಿ ಕಳೆದು ಹೋಗಿರುವ ವೈಭವವನ್ನು ಮರಳಿ ಸ್ಥಾಪಿಸುವ ಹೊಸ ಪ್ರಯತ್ನಗಳು ನಡೆಯುತ್ತಿವೆ’ ಎಂದು ತಿಳಿಸಿದರು.

‘ಮಧ್ಯಕಾಲೀನ ಯುಗದಲ್ಲಿ, ವಿವಿಧ ಆಧ್ಯಾತ್ಮಕ ಸಂಪ್ರದಾಯಗಳು ಹೇಗೆಲ್ಲ ಒಟ್ಟುಗೂಡಿದ್ದವು ಎಂಬುದನ್ನು ಕವಿ ಲಾಲ್‌ದೇಡ್‌ ತಮ್ಮ ಕವಿತೆಗಳಲ್ಲಿ ಉಲ್ಲೇಖಿಸಿದ್ದಾರೆ. ಲಲ್ಲೇಶ್ವರಿಯ ಕೃತಿಗಳಲ್ಲಿ ಕೋಮು ಸೌಹಾರ್ದ ಮತ್ತು ಶಾಂತಿ ಸಹಬಾಳ್ವೆಗೆ ಕಾಶ್ಮೀರ ಎಂಥ ಚೌಕಟ್ಟನ್ನು ಒದಗಿಸಿತ್ತು ಎಂಬುದನ್ನು ನೀವು ನೋಡಬಹುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.