ನವದೆಹಲಿ: ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ನಾಚಿಕೆಗೇಡಿನ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಟುಟೀಕೆ ಮಾಡಿದ್ದಾರೆ.
ಶಿವಸೇನಾ–ಎನ್ಸಿಪಿ–ಕಾಂಗ್ರೆಸ್ ಮೈತ್ರಿಕೂಟವು ಈ ಪ್ರಯತ್ನವನ್ನು ತಡೆದಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಡೆಸುವ ಅಪಪ್ರಚಾರವನ್ನು ತಡೆಯಲು ಮೂರು ಪಕ್ಷಗಳ ಮೈತ್ರಿಕೂಟವು ಕಟಿ
ಬದ್ಧವಾಗಿ ಕೆಲಸ ಮಾಡಲಿದೆ ಎಂದೂ ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.
ಜನರ ದಿನನಿತ್ಯದ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯುವುದಕ್ಕೆ ಮೋದಿ–ಶಾ ಜೋಡಿಯು ವಿಭಜನೆ ನೀತಿ ಅನುಸರಿಸುತ್ತಿದೆ. ಸಭ್ಯತೆ ವಿಚಾರದಲ್ಲಿ ಅವರು ದಿವಾಳಿಯಾಗಿದ್ದಾರೆ. ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದರ ಲವಲೇಶ ಅರಿವೂ ಅವರಿಗೆ ಇಲ್ಲ ಎಂದು ಸೋನಿಯಾ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಪಕ್ಷವು ನಾಶವಾಗಲಿದೆ ಎಂಬ ಭಾವನೆಯೇ ಸರಿ ಇಲ್ಲ ಎಂಬುದನ್ನು ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣಾ ಫಲಿತಾಂಶವು ತೋರಿಸಿಕೊಟ್ಟಿದೆ. ತನ್ನನ್ನು ಬಿಟ್ಟರಿಲ್ಲ ಎಂಬ ಬಿಜೆಪಿಯ ಅಹಂ ಅನ್ನು ಈ ಫಲಿತಾಂಶವು ಟೊಳ್ಳಾಗಿಸಿದೆ. ಹಾಗೆಯೇ ಕಾಂಗ್ರೆಸ್ ಪಕ್ಷದ ನೈತಿಕತೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.
ಶರಣಾಗುವಂತೆ ಬೆದರಿಕೆ ಒಡ್ಡುವ ತಂತ್ರವನ್ನು ಬಿಜೆಪಿ ಅನುಸರಿಸಲಿದೆ ಎಂಬ ಎಚ್ಚರಿಕೆಯನ್ನು ಪಕ್ಷದ ಸಹೋದ್ಯೋಗಿಗಳಿಗೆ ಸೋನಿಯಾ ಅವರು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.