ನವದೆಹಲಿ: ಸಂಸತ್ತಿನಲ್ಲಿ ನ್ಯಾಯಬದ್ಧವಾದ ಬೇಡಿಕೆ ಇರಿಸಿದ ಕಾರಣಕ್ಕಾಗಿ ಸಂಸದರನ್ನು ಅಮಾನತು ಮಾಡುವ ಮೂಲಕ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಸಂವಿಧಾನ ಸದನದ (ಹಳೆ ಸಂಸತ್ ಕಟ್ಟಡ) ಸೆಂಟ್ರಲ್ ಹಾಲ್ನಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು. ‘ಈಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶದಿಂದ ಆಗಿರುವ ನಿರಾಶೆಯನ್ನು ಲೋಕಸಭೆ ಚುನಾವಣೆಗೆ ಸಕಾರಾತ್ಮಕ ಬಲವನ್ನಾಗಿ ಬದಲಾಯಿಸಬೇಕು’ ಎಂದರು.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಕುರಿತು ಇದೇ ಮೊದಲ ಬಾರಿಗೆ ಸೋನಿಯಾ ಅವರು ಮಾತನಾಡಿದ್ದಾರೆ. ‘ನಾವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ತಾಳ್ಮೆ, ದೃಢಚಿತ್ತವು ಸವಾಲು ಎದುರಿಸಲು ನಮಗೆ ಶಕ್ತಿ ನೀಡುತ್ತದೆ. ನಮ್ಮ ಸಿದ್ಧಾಂತ ಮತ್ತು ಮಾಲ್ಯಗಳು ಈ ಸಂದರ್ಭದಲ್ಲಿ ನಮಗೆ ದಾರಿದೀಪವಾಗಲಿವೆ’ ಎಂದರು.
‘ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷವಾಗಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷವಾಗಿ ನಮ್ಮ ಮೇಲೆ ಗುರುತರ ಜವಾಬ್ದಾರಿ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.