ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ರಾಜ್ಯಗಳಲ್ಲಿ ಸೋಮವಾರ ಬೆಳಿಗ್ಗೆ ದಟ್ಟ ಮಂಜು ಕವಿದ ಕಾರಣ 30 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, 3 ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ
ವಿಮಾನಗಳ ಸಂಚಾರದಲ್ಲಿಯೂ ವ್ಯತ್ಯಯವಾಗಿದೆ. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು CAT III B ಸ್ಥಿತಿಯಲ್ಲಿದೆ. ಅಂದರೆ, ರನ್ವೇನಲ್ಲಿ ಗೋಚರತೆ ವ್ಯಾಪ್ತಿ (ಆರ್ವಿಆರ್) 50 ಮೀಟರ್ನಿಂದ 175 ಮೀಟರ್ ನಡುವೆ ಇದೆ. ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಪ್ರೊಸಿಜರ್(ಐಎಲ್ಎಸ್) ಮೂಲಕ ಲ್ಯಾಂಡಿಂಗ್ ಮಾಡಲಾಗುತ್ತಿದೆ.
ವಿಮಾನ ಹಾರಾಟದ ಮಾಹಿತಿಗಾಗಿ ಪ್ರಯಾಣಿಕರಿಗೆ ಸಂಪರ್ಕದಲ್ಲಿರುವಂತೆ ಬೇರೆ ಬೇರೆ ವಿಮಾನಯಾನ ಕಂಪನಿಗಳು ತಿಳಿಸಿವೆ. ಕ್ಷೀಣವಾಗಿರುವ ಗೋಚರತೆಯಿಂದ ವಾಹನ ಸಂಚಾರರಿಗೂ ತೊಂದರೆಯಾಗಿದೆ. ‘ದೆಹಲಿ–ನೊಯಿಡಾ ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದು, ಜಾಗರೂಕತೆಯಿಂದ ವಾಹನ ಚಲಿಸಬೇಕಿದೆ’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.
ಮುಂದಿನ ಎರಡು ದಿನಗಳವರೆಗೆ ಉತ್ತರ ಭಾರತದಲ್ಲಿ ಚಳಿ ಹೀಗೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇವಲ 50ರಿಂದ 100 ಮೀಟರ್ ಗೋಚರತೆ ಇರುವುದರಿಂದ ಹವಾಮಾನ ಇಲಾಖೆ ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದಾರೆ.
ದೆಹಲಿಯಲ್ಲಿ ಈ ತಿಂಗಳ ಸರಾಸರಿ ಗರಿಷ್ಠ ಉಷ್ಣಾಂಶ 19.15 ಡಿಗ್ರಿ ಸೆಲ್ಸಿಯಸ್ ತಲುಪಿದರೆ, ಈ ವರ್ಷದ ಡಿಸೆಂಬರ್ 1901ರ ನಂತರದ ಎರಡನೇ ಅತಿ ಕನಿಷ್ಠ ಉಷ್ಣಾಂಶದ ತಿಂಗಳೆನಿಸಲಿದೆ. 1901 ರಿಂದ 2018ರವರೆಗೆ ನಾಲ್ಕು ವರ್ಷಗಳಲ್ಲಿ (1919, 1929, 1961 ಮತ್ತು 1997) ಮಾತ್ರ ಡಿಸೆಂಬರ್ನ ಗರಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಹಾಗೂ ಅದಕ್ಕಿಂತ ಕಡಿಮೆ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.