ನವದೆಹಲಿ: ಕುಖ್ಯಾತ ಉಗ್ರ ಝಾಕಿರ್ ಮೂಸಾನ ನಿಕಟವರ್ತಿ ಸೇರಿ ಆರು ಮಂದಿ ಉಗ್ರರನ್ನು ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಶನಿವಾರ ಹತ್ಯೆ ಮಾಡಿದೆ.
ಝಾಕಿರ್ ಮೂಸಾ ನೇತೃತ್ವ ಅನ್ಸಾರ್ ಘಾಜವತ್ ಉಲ್ ಹಿಂದ್ ಸಂಘಟನೆಯ ಉಪಮುಖ್ಯಸ್ಥ ಸೋಹಿಲ್ ಅಲಿಯಾಸ್ ರೆಹಾನ್ ಖಾನ್ ಸಹ ಹತ್ಯೆಯಾಗಿದ್ದಾನೆ ಎಂದು ಸೇನೆಯ ಮೂಲಗಳು ತಿಳಿಸಿವೆ.
‘ದಕ್ಷಿಣ ಕಾಶ್ಮೀರದ ಅವಂತಿಪುರ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿದಾಳಿ ನಡೆಸಿದ ಯೋಧರು ಆರು ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ.ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆ ಮುಕ್ತಾಯಗೊಂಡಿದೆ’ ಎಂದು ರಕ್ಷಣ ಸಚಿವಾಲಯದ ವಕ್ತಾರರು ತಿಳಿಸಿದರು.
ಸದ್ಯ ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸುತ್ತಿರುವ ಝಾಕಿರ್ ಮೂಸಾ ಈ ಮೊದಲು ನಿಷೇಧಿತ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಆಗಿದ್ದನು.ಜೈಷ್–ಇ– ಮೊಹಮ್ಮದ್ (ಜೆಇಎಂ) ಸಂಘಟನೆಯೊಂದಿಗೂ ನಂಟು ಹೊಂದಿದ್ದಾನೆ.
ಇದೇ ನವೆಂಬರ್ನಲ್ಲಿಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಫಿರೋಜ್ಪುರದ ಮೂಲಕಜೈಷ್ ಎ ಮೊಹಮ್ಮದ್ (ಜೆಇಎಂ) ಸಂಘಟನೆಯ ಏಳು ಉಗ್ರರು ಪಂಜಾಬ್ಗೆ ನುಸುಳಿದ್ದು, ಅವರು ಅಮೃತಸರದ ಮೂಲಕ ದೆಹಲಿಗೆ ತೆರಳಲು ಯೋಜನೆ ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.