ಪುಣೆ: ಮಹಾರಾಷ್ಟ್ರವೇ ಇರಲಿ ಅಥವಾ ರಾಷ್ಟ್ರದ ಯಾವುದೇ ಭಾಗವಿರಲಿ, ರಾಜಕೀಯದ ಹಂಗಿಲ್ಲದೆ ಅಭಿವೃದ್ಧಿ ಕೆಲಸಗಳು ಸಾಗುತ್ತವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಶನಿವಾರ ಸಾಂಗ್ಲಿಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಗಡ್ಕರಿ, ತಾವು ಮಹಾರಾಷ್ಟ್ರದ ರಾಯಭಾರಿ ಎಂದೇ ಭಾವಿಸಿರುವುದಾಗಿಯೂ, ಮಹಾರಾಷ್ಟ್ರವು ರಾಷ್ಟ್ರದಲ್ಲಿ ಮೊದಲ ಸ್ಥಾನಕ್ಕೆ ಏರುತ್ತದೆ ಎಂಬ ನಂಬಿಕೆ ಇರುವುದಾಗಿಯೂ ತಿಳಿಸಿದರು.
''ಕಳೆದ 7 ವರ್ಷಗಳಲ್ಲಿ, ಮಹಾರಾಷ್ಟ್ರದಲ್ಲಿ 5 ಲಕ್ಷ ಕೋಟಿ ಮೌಲ್ಯದ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸುವ ಅವಕಾಶ ಸಿಕ್ಕಿದೆ. ಬಂದರು, ಮೀನುಗಾರಿಕೆ, ಜಲ ಸಂಪನ್ಮೂಲ, ಎಂಎಸ್ಎಂಇ ಮತ್ತು ರಸ್ತೆ ಸಾರಿಗೆ ಖಾತೆಗಳನ್ನು ನಿರ್ವಹಿಸಿದ್ದೇನೆ. ಆದರೆ ನಾನೊಬ್ಬ ಮಹಾರಾಷ್ಟ್ರದ ರಾಯಭಾರಿ ಎಂದೇ ಭಾವಿಸಿದ್ದೇನೆ. ನಾನು ಸದಾ ಛತ್ರಪತಿ ಶಿವಾಜಿ ಮಹಾರಾಜರ ಭೂಮಿಯ ಏಳ್ಗೆಯನ್ನು ಬಯಸುತ್ತೇನೆ'' ಎಂದು ಗಡ್ಕರಿ ಹೇಳಿದರು.
''ಯಾವುದಾದರು ಒಂದು ರಾಜ್ಯ 'ನಂಬರ್ 1' ಆಗಿ ಹೊರ ಹೊಮ್ಮಿದರೆ ಅದು ಮಹಾರಾಷ್ಟ್ರವಾಗಿರಬೇಕು. ಮಹಾರಾಷ್ಟ್ರವಿರಲಿ ಅಥವಾ ರಾಷ್ಟ್ರದ ಯಾವುದೇ ಭಾಗವಿರಲಿ ಅಭಿವೃದ್ಧಿ ಕೆಲಸಗಳಿಗೆ ರಾಜಕೀಯದ ಹಂಗಿಲ್ಲ'' ಎಂದು ಗಡ್ಕರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.