ADVERTISEMENT

ಧನಬಾದ್‌ ನ್ಯಾಯಾಧೀಶ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 21:15 IST
Last Updated 6 ಆಗಸ್ಟ್ 2022, 21:15 IST
   

ಧನಬಾದ್‌ (ಜಾರ್ಖಂಡ್‌): ಕಳೆದ ವರ್ಷ ಜಾರ್ಖಂಡ್‌ನ ಧನಬಾದ್‌ನಲ್ಲಿ ನಡೆದಿದ್ದ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋರಿಕ್ಷಾ ಚಾಲಕ ಮತ್ತು ಆತನ ಸಹಚರನಿಗೆ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಆಟೊ ಚಾಲಕ ಲಖನ್‌ ವರ್ಮಾ ಮತ್ತು ಆತನ ಸಹಚರ ರಾಹುಲ್‌ ವರ್ಮಾ ಅವರನ್ನು ಈ ಪ್ರಕರಣದಲ್ಲಿ ದೋಷಿ ಎಂದು ಜುಲೈ 28ರಂದು ಆದೇಶಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಜನಿಕಾಂತ್‌ ಪಾಠಕ್‌ ಅವರು ಶನಿವಾರ ಶಿಕ್ಷೆ ಪ್ರಕಟಿಸಿದರು.

ಜೀವಾವಧಿ ಶಿಕ್ಷೆಯ ಜತೆಗೆ ಇಬ್ಬರೂ ದೋಷಿಗಳಿಗೆ ತಲಾ ₹ 20 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೆ ಐಪಿಸಿ ಕಲಂ 201ರಡಿ (ಪುರಾವೆಗಳು ಕಣ್ಮರೆಯಾಗುವಂತೆ ಮಾಡಿದ ಮತ್ತು ಅಪರಾಧಿಯನ್ನು ರಕ್ಷಿಸಲು ಸುಳ್ಳು ಮಾಹಿತಿ ನೀಡಿದ್ದ ಆರೋಪ) ಇಬ್ಬರಿಗೂ ತಲಾ ಏಳು ವರ್ಷಗಳು ಜೈಲು ಶಿಕ್ಷೆಯ ಜತೆಗೆ ತಲಾ ₹ 10,000 ದಂಡವನ್ನು ವಿಧಿಸಲಾಗಿದೆ. ಎರಡೂ ಶಿಕ್ಷೆಯನ್ನೂ ಏಕಕಾಲದಲ್ಲಿ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ನ್ಯಾಯಾಧೀಶ ಉತ್ತಮ್ ಆನಂದ್ (49) ಅವರು ಕಳೆದ ವರ್ಷ ಜುಲೈ 28ರಂದು ಬೆಳಿಗ್ಗೆ 5.30 ಗಂಟೆಗೆ ಜಾಗಿಂಗ್ ಮಾಡುತ್ತಿದ್ದಾಗ ಆಟೋರಿಕ್ಷಾದಿಂದ ಗುದ್ದಿ ಕೊಲ್ಲಲ್ಲಾಗಿತ್ತು.

‘ನ್ಯಾಯಾಧೀಶರ ಕೊಲೆಯು ಅತಿ ಅಪರೂಪದ ಅಪರಾಧವಾಗಿದ್ದು, ಉದ್ದೇಶ ಪೂರಕವಾಗಿಯೇ ಈ ಕೃತ್ಯ ನಡೆಸಲಾಗಿದೆ. ಹಾಗಾಗಿ ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ’ ಸಿಬಿಐ ಪರ ವಕೀಲ ಅಮಿತ್‌ ಜಿಂದಾಲ್‌ ವಾದಿಸಿದರು.

ಸಿಬಿಐ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅಪರಾಧಿಗಳ ಪರ ವಕೀಲ ಕುಮಾರ್‌ ಬಿಮೆಲೆಂದು ಪ್ರತಿಕ್ರಿಯಿಸಿದರು.

ನ್ಯಾಯಾಧೀಶ ಆನಂದ್ ಹತ್ಯೆ ಪ್ರಕರಣದ ವಿಚಾರಣೆ ಈ ವರ್ಷದ ಫೆಬ್ರುವರಿಯಲ್ಲಿ ಪ್ರಾರಂಭವಾಗಿತ್ತು. ನ್ಯಾಯಾಲಯವು 58 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿತ್ತು. ಪ್ರಕರಣವನ್ನು ಜಾರ್ಖಂಡ್ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.